Tuesday, October 5, 2010

ಸಹಾಯದ ಮನಸ್ಸಿದ್ದರೆ

ಸ್ನೇಹಿತರೆ ಬಹಳ ದಿನಗಳಿಂದ ನನ್ನ ತಲೆಯಲ್ಲಿ ಹೇಳುವುದಕ್ಕಿಂತ ಮಾಡಿ ತೋರಿಸಬೇಕು ಎನ್ನುವ ತುಡಿತ ಕಾಡುತ್ತಿತ್ತು. ಅದನ್ನು ಹೇಗೆ ಹೊರ ಹಾಕಬೇಕೆಂಬುದು ನನ್ನ ಪ್ರಶ್ನೆ ಹಾಗೆಯೇ ಉಳಿದಿತ್ತು. ಬಡವರಿಗೆ ಸಹಾಯ ಮಾಡಬೇಕು ಎನ್ನುವ ರಾಜಕಾರಣಿಗಳ ಮಾತು ಯಾಕೋ ಹಲವಾರು ಬಾರಿ ಜಿಗುಪ್ಸೆ ಹುಟ್ಟಿಸಿದ್ದು ಇದೆ. ಕೇವಲ ಜಾತಿ ಬಾಂಧವರಿಗೆ ಮಾತ್ರವಲ್ಲದೆ ಕಷ್ಟದಲ್ಲಿ ಇರುವಂತವರಿಗೆ ಸಹಾಯ ಮಾಡಿದರೆ ಏನೋ ಸಾಧಿಸಿದೆವು ಎನ್ನುವ ನೆಮ್ಮದಿ. ಸಹಾಯ ಮಾಡಿದಿವೆಲ್ಲಾ ಎನ್ನುವ ಸಂತೋಷ. ಇದು 100ಕೋಟಿ ರೂಪಾಯಿಗಳು ಕೊಟ್ಟರೂ ಸಿಗುವುದಿಲ್ಲ.
ನನ್ನ ಸ್ವಪ್ರತಿಷ್ಠೆಗಾಗಿ ಹೇಳುತ್ತಿಲ್ಲ. ಕೆಲವರಿಗೆ ಕಚೇರಿಯಲ್ಲಿ ಸಹಾಯ ಮಾಡಿದಾಗ ಅವರು ಹೇಳುವ ಧನ್ಯವಾದ ಸಾಕಷ್ಟು ದಿನಗಳ ಕಾಲ ನಮ್ಮನ್ನು ಪುಷ್ಠಿಯಾಗಿರಿಸುತ್ತದೆ. ಸತ್ತಂತವರ ಮನೆಗೆ ಸಹಾಯ ಮಾಡಿದರೆ ಏನೋ ಉಪಕಾರ ಮಾಡಿದಿವೆಲ್ಲಾ ಎನ್ನುವ ಸಾರ್ಥಕತೆ. ಇದು ಕೇವಲ ನನ್ನ ಭಾವನೆಯಲ್ಲ. ಇದು ಸಹಾಯ ಮಾಡಿದಂತಹ ಪ್ರತಿಯೊಬ್ಬರಿಗೂ ಆಗಿರುತ್ತದೆ ಎಂದು ಭಾವಿಸಿರುತ್ತೇನೆ.
ಸ್ನೇಹಿತರೆ ಕಳೆದ ವರ್ಷ "ಸ್ವರ್ಣ ಗ್ರಾಮೀಣಾಭಿವೃದ್ದಿ ಹಾಗೂ ಮಹಿಳಾ ಸಬಲೀಕರಣ ಟ್ರಸ್ಟ್" ಎನ್ನುವ ಟ್ರಸ್ಟ್ ಒಂದನ್ನು ಕೇವಲ ಬಲ ಹೀನರಿಗಾಗಿ ಕೆಲವೇ ಮಂದಿ ಸೇರಿ ಮಾಡಿದೆವು. ಇದು ಆರಂಭವಾಗಿ ಈಗಾಗಲೆ ವರ್ಷ ಕಳೆದಿದೆ. ಹಲವಾರು ಮಹಿಳೆಯರಿಗೆ ಇದರ ಅಡಿಯಲ್ಲಿ ಹೊಲಿಗೆ ತರಬೇತಿ ನೀಡಿದ್ದೇವೆ. ಯಾವುದೇ ಪ್ರತ್ಯಾಕ್ಷೇಪವಿಲ್ಲದೆ. ಲಕ್ಷಾಂತರ ರೂಗಳನ್ನು ವ್ಯಯಿಸಿದ್ದೇವೆ. ಕಾರಣ ಬಲ ಹೀನರಿಗೆ ಒಂದು ಸಹಾಯವಾಗುತ್ತದಲ್ಲಾ ಎನ್ನುವ ಏಕೈಕ ಕಾರಣಕ್ಕಾಗಿ. ಸತ್ತಂತವರ ಮನೆಯಲ್ಲಿನ ಹಲವರ ಗೋಳು ಹೇಳ ತೀರದಂತಾಗಿರುತ್ತದೆ. ಕಚೇರಿಗೆ ಅಲಿದು ಅಲಿದು ಸಾಕಾಗಿರುತ್ತಾರೆ, ಇಂತವರ ಸಹಾಯಕ್ಕೆಂದೇ ಈ ಟ್ರಸ್ಟ್ ತೆಗೆದಿರುವುದು. ನಿಮಗೆ ಸಹಾಯ ಮಾಡಲು ಇಚ್ಛೆಯಿದ್ದರೆ
IFSC code : KARB 0000704
A/C no : 7042000100045801
ಈ ಮೇಲಿನ ಅಕೌಂಟ್್ಗೆ ನಿಮ್ಮ ಹಣ ಸಂದಾಯ ಮಾಡಬಹುದು. ನಿಮಗೆ ಯಾವುದೇ ರೀತಿಯ ವಿಷಯ ಚರ್ಚಿಸಬೇಕೆಂದರೆ
ಸುರೇಶ್ : 7899542639ಗೆ ಸಂಪರ್ಕಿಸಬಹುದು.

Saturday, September 25, 2010

ಕನ್ನಡ ಫಾಂಟ್ ಇಲ್ಲದಿದ್ದರೂ ಕಡತ ಓದುವುದು

ಮೈಕ್ರೋಸಾಫ್ಟ್ ವರ್ಡ್‌‌ನಲ್ಲಿ ನುಡಿ ಅಥವಾ ಬರಹ ತಂತ್ರಾಂಶದ ಮೂಲಕ ಕನ್ನಡ ಫಾಂಟ್ ಬಳಸಿ(ಉದಾ: Nudi Akshar-01) ಬರೆದ ಕಡತಗಳನ್ನು ಆ ಫಾಂಟ್ ಇಲ್ಲದ ಕಂಪ್ಯೂಟರ್‌ಗಳಲ್ಲಿ ಓದುವುದಕ್ಕೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಕನ್ನಡದಲ್ಲಿ ಬರೆದ ಕಡತಗಳನ್ನು ಬೇರೆಯವರಿಗೆ ಕಳುಹಿಸುವಾಗ, ಅವರಲ್ಲಿ ಆ ಫಾಂಟ್ ಇಲ್ಲದಿದ್ದರೂ ಅವರು ನಿಮ್ಮ ಡಾಕ್ಯುಮೆಂಟನ್ನು ಓದುವಂತೆ ಮಾಡಲು ಹೀಗೆ ಮಾಡಿ. ನೀವು ವರ್ಡ್ ಕಡತವನ್ನು ಸೇವ್ ಮಾಡುವ ಮೊದಲು tools ಗೆ ಹೋಗಿ Options ಒತ್ತಿರಿ.

ನಂತರ Save ಟ್ಯಾಬ್ ಕ್ಲಿಕ್ ಮಾಡಿ. ಅಲ್ಲಿ Save options ಕೆಳಗೆ Embed TrueType fonts ಅನ್ನು ಸೆಲೆಕ್ಟ್ ಮಾಡಿ OK ಒತ್ತಿರಿ.


ಈಗ ನಿಮ್ಮ ಕಡತಗಳನ್ನು ಸೇವ್ ಮಾಡಿ ಕಳುಹಿಸಿದರೆ ಆ ಕಡತವು ಯಾವುದೇ ಫಾಂಟಿಲ್ಲಿ ಬರೆದಿದ್ದರೂ ಕೂಡ ಬೇರೆ ಕಂಪ್ಯೂಟರ್‌‌ಗಳಲ್ಲಿ ಅದನ್ನು ಓದಬಹುದು, ಅವರಲ್ಲಿ ಆ ಫಾಂಟ್ ಇಲ್ಲದಿದ್ದರೂ ಓದುವುದಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. Unicodeನಲ್ಲಿ ಇಂತಹ ಹೆಚ್ಚಿನ ತೊಂದರೆಗಳಿರುವುದಿಲ್ಲ. ಆದರೆ ANSIಯಲ್ಲಿ ಸಾಕಷ್ಟು ಫಾಂಟಿನ ರಗಳೆಗಳಿರುತ್ತವೆ. ಆದ್ದರಿಂದ Unicodeನ್ನೇ ಹೆಚ್ಚು ಬಳಸುವುದು ಸೂಕ್ತ.
ನನ್ನ ಬ್ಲಾಗ್‌‌ನಲ್ಲಿ ಈ ಲೇಖನ

ರಾಷ್ಟ್ರಭಾಷೆಯಿಲ್ಲದ ರಾಷ್ಟ್ರದಲ್ಲಿ…

ಅದು ೧೯೩೭ ರ ಸಮಯ ಇಡಿ ದೇಶ ಸ್ವಾತಂತ್ರ್ಯ ಹೋರಾಟದಲ್ಲಿ ಮುಳುಗಿತ್ತು.ಆದರೆ ಇತ್ತ ತಮಿಳು ನಾಡಿನಲ್ಲಿ ಬೇರೆಯದೇ ಹೋರಾಟ ಶುರುವಾಗಿತ್ತು! ಒಂದು ಕಡೆ ನೋಡಿದರೆ ವಿದೇಶಿಗಳ ವಿರುದ್ಧ ಹೋರಾಟ ಇನ್ನೊಂದು ಕಡೆ ಇದೆ ದೇಶದ ಮತ್ತೊಂದು ಭಾಷೆಯ ಹೇರಿಕೆಯ ಮೇಲೆ ಹೋರಾಟ! ಅದು ‘ಹಿಂದಿ ಹೇರಿಕೆಯ ವಿರುದ್ಧ’!
ಮೇಲ್ನೋಟಕ್ಕೆ ಸ್ವಾತಂತ್ರ್ಯ ಹೋರಾಟದಂತಹ ಸಮಯದಲ್ಲಿ ದಂಗೆಯೆದ್ದ ತಮಿಳರ ಮೇಲೆ ಕೋಪ ಉಕ್ಕಿ ಬರುವುದು ಸಹಜವೇ.ಆದರೆ ಅವರೇನು ಸುಮ್ ಸುಮ್ನೆ ಬಾಯಿ ಬಡ್ಕೊತಿದ್ರಾ? ಅವರು ಹಾಗೆ ತಿರುಗಿ ಬೀಳುವಂತೆ ಮಾಡಿದ್ದಾದರು ಏನು? ಮಾಡಿದ್ದಾದರೂ ಯಾರು? ಅವ್ರ ಹೆಸರು ಸಿ.ರಾಜಗೋಪಾಲಚಾರಿ.

ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ೧೯೩೭ರಲ್ಲಿ ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ನ್ಯಾಷನಲ್ ಕಾಂಗ್ರೆಸ್ಸಿನ ರಾಜಗೋಪಾಲಚಾರಿಯವರು, ಶಿಕ್ಷಣದಲ್ಲಿ ‘ಹಿಂದಿ’ ಕಲಿಕೆಯನ್ನ ಕಡ್ಡಾಯ ಮಾಡಿಬಿಟ್ಟರು.ಅಷ್ಟು ಸಾಕಾಯ್ತು ಪೆರಿಯಾರ್ ನೇತೃತ್ವದಲ್ಲಿ ಶುರುವಾದ ಹೋರಾಟ ಮೂರು ವರ್ಷಗಳಷ್ಟು ಕಾಲ ನಡೆದು ಕಡೆಗೆ ೧೯೪೦ರಲ್ಲಿ ಬ್ರಿಟಿಷರು ಆ ನಿರ್ಧಾರವನ್ನ ವಾಪಸ್ ಪಡೆದ ಮೇಲಷ್ಟೇ ತಮಿಳುನಾಡು ಶಾಂತವಾಗಿದ್ದು.ಹಿಂದಿಯನ್ನ ರಾಷ್ಟ್ರ ಭಾಷೆ ಮಾಡುವ ನಾಯಕರ ಆಸೆಗೆ ಈ ಹೋರಾಟ ಭಂಗ ತರುವಲ್ಲಿ ತಮಿಳರ ಹೋರಾಟ ಯಶಸ್ವಿಯಾಗಿತ್ತು.

ಗಾಂಧೀಜಿ,ಸಾವರ್ಕರ್,ಸುಭಾಷ್,ಅಂಬೇಡ್ಕರ್,ನೆಹರೂ ಸೇರಿದಂತೆ ಆಗಿನ ಎಲ್ಲ ಮೊದಲ ಸಾಲಿನ ನಾಯಕರು ಈ ವಿಷಯದಲ್ಲಿ ಎಡವಿದವರೇ.ಸ್ವಾತಂತ್ರ್ಯ ಪೂರ್ವದಲ್ಲೇ ನಡೆದ ಇಂತ ಹೋರಾಟದಿಂದಾದರೂ ಆಗಿನ ನಾಯಕರುಗಳು ಈ ದೇಶದ ಭಾಷ ವೈವಿಧ್ಯತೆಯನ್ನ ಸೂಕ್ಷ್ಮವಾಗಿ ಗಮನಿಸಬೇಕಾಗಿತ್ತು, ಆದರೆ ಗಮನಿಸಲಿಲ್ಲ.ಸ್ವಾತಂತ್ರ್ಯ ಬಂದ ಮೇಲೆ ಮತ್ತೊಂದು ಎಡವಟ್ಟು ಮಾಡಿದ್ರು.ಅದು ೧೫ ವರ್ಷಗಳ ನಂತರ ಹಿಂದಿಯೊಂದೇ ಭಾರತದ ಆಡಳಿತಾತ್ಮಕ ಭಾಷೆಯಾಗುತ್ತದೆ ಅನ್ನೋ ಅಂಶವನ್ನ ಸಂವಿಧಾನದಲ್ಲಿ ಸೇರಿಸಿದ್ದು! ಮತ್ತೆ ಎದ್ದು ನಿಂತರು ತಮಿಳರು.ಸರಿ ಸುಮಾರು ಎಪ್ಪತ್ತು ಜೀವಗಳು ಬಲಿದಾನಗೈದವು.ಕಡೆಗೆ ಆಗಿನ ಪ್ರಧಾನಿ ಶಾಸ್ತ್ರಿಗಳು ಹಿಂದಿಯೇತರ ರಾಜ್ಯಗಳು ಬಯಸುವವರೆಗೂ ಇಂಗ್ಲಿಷ್ ಸಹ ನಮ್ಮ ಆಡಳಿತಾತ್ಮಕ ಭಾಷೆಗಳಲ್ಲೊಂದಾಗಿರುತ್ತದೆ ಅಂತ ಹೇಳಿಕೆ ಕೊಟ್ಟ ಮೇಲೆ ಪರಿಸ್ಥಿತಿ ಹತೋಟಿಗೆ ಬಂದಿದ್ದು.ಆಗ ಕೈಗೊಂಡ ತಪ್ಪು ನಿರ್ಧಾರದಿಂದ ೧೯೬೭ರಲ್ಲಿ ಪಟ್ಟ ಕಳೆದುಕೊಂಡ ಕಾಂಗ್ರೆಸ್ಸ್ ಎಂಬ ಕಾಂಗ್ರೆಸ್ ಇವತ್ತಿನವರೆಗೆ ತಮಿಳುನಾಡಿನಲ್ಲಿ ಪತ್ತೆಯಿಲ್ಲದಂತಾಗಿದೆ.


ಈ ಎರಡು ಪ್ರಬಲ ಹೋರಾಟದಿಂದಾಗಿ ಹಿಂದಿಯನ್ನ ಮುಂಬಾಗಿಲ ಮೂಲಕ ಹಿಂದಿಯೇತರ ರಾಜ್ಯಗಳು (ದಕ್ಷಿಣ ಹಾಗೂ ಪೂರ್ವ) ಒಪ್ಪುವುದಿಲ್ಲ ಅಂತ ಮನವರಿಕೆಯಾದ ನಂತರ ಕೇಂದ್ರ ಸರ್ಕಾರ ಹಿಂಬಾಗಿಲ ಮೂಲಕ ಪರೋಕ್ಷವಾಗಿ ಹಿಂದಿ ಹೇರಿಕೆಯನ್ನ ಶುರು ಹಚ್ಚಿಕೊಂಡಿದ್ದು.ಈ ಹಂತದಲ್ಲೇ ಬಂದಿದ್ದು ತ್ರಿಭಾಷಾ ಸೂತ್ರ!


ಅದನ್ನ ಹಲವು ರಾಜ್ಯಗಳು ಒಪ್ಪಿಕೊಂಡವು.ಅದರಲ್ಲಿ ಕರ್ನಾಟಕವು ಒಂದಾಗಿತ್ತು.ಅವೈಜ್ಞಾನಿಕ ತ್ರಿ ಭಾಷ ಸೂತ್ರದಿಂದಾಗಿ ಕನ್ನಡ ನಾಡಿನಲ್ಲಿ ಕನ್ನಡ ಕಲಿಯದೇ ಸಹ ಒಬ್ಬ ಕನ್ನಡ ವಿದ್ಯಾರ್ಥಿ ಹೈ-ಸ್ಕೂಲ್ ಅನ್ನು ಸಂಸ್ಕೃತ,ಇಂಗ್ಲಿಷ್ ಹಾಗೂ ಹಿಂದಿ ಕಲಿತು ಮುಗಿಸಬಹುದಿತ್ತು.ಸಾಹಿತಿಗಳು,ಬುದ್ದಿಜೀವಿಗಳು ದನಿಯೆತ್ತಿದ್ದರಿಂದಾಗಿ ಬಂದ ‘ಗೋಕಾಕ್ ವರದಿ’ ಕನ್ನಡಕ್ಕೆ ಶಾಲೆಯಲ್ಲಿ ಪ್ರಥಮ ಭಾಷೆಯ ಸ್ಥಾನಮಾನ ನೀಡಬೇಕು ಅಂತ ಹೇಳಿತ್ತು.ಆದರೆ ಸರ್ಕಾರ ಕೆಲವು ಜನರ ವಿರೋಧ ನೋಡಿ ವರದಿ ಜಾರಿಗೆ ತರಲಿಲ್ಲ.ನಿಧಾನಕ್ಕೆ ಮತ್ತೆ ಚಳುವಳಿ ಶುರುವಾಯಿತು.ಕನ್ನಡಿಗರು ಯಥಾ ಪ್ರಕಾರ ಮಲಗೆ ಇದ್ದರು!!


ಕನ್ನಡ ಹೋರಾಟಗಾರರ ಕರೆಗೆ ಓ ಗೊಟ್ಟು ಡಾ|| ರಾಜ್ ಕುಮಾರ್ ಎದ್ದು ಹೊರಟರು.ಹಾಗೆ ಶುರುವಾಯಿತು ‘ಗೋಕಾಕ್ ಚಳುವಳಿ’ ಅನ್ನುವ ಸುವರ್ಣ ಅಧ್ಯಾಯ.ರಾಜ್ ರಂಗ ಪ್ರವೇಶದಿಂದ ಮಲಗಿದ್ದ ಜನರು ಬೀದಿಗಿಳಿದರು,ಸರ್ಕಾರ ತಲೆಬಾಗಿತು.ಕನ್ನಡ ಕಲಿಕೆ ಕಡ್ಡಾಯವಾಯಿತು.ಅವತ್ತೆನಾದರು ಗೋಕಾಕ್ ಚಳುವಳಿಯಾಗದೆ ಇದ್ದಿದ್ದರೆ ಬಹುಷಃ ನಾನಿವತ್ತು ಇದನ್ನ ಕನ್ನಡದಲ್ಲಿ ಬರೆಯುತಿದ್ದೆನಾ!? ಗೊತ್ತಿಲ್ಲ.


ನಾವೇನೋ ನಮ್ಮ ರಾಜ್ಯದಲ್ಲಿ ಕನ್ನಡ,ಇಂಗ್ಲೀಷ್,ಹಿಂದಿ ಕಲಿಯುತ್ತ ಬಂದೆವು.ಅಲ್ಲೂ ಹಿಂದಿ ಕಲಿಕೆಯ ಸಮಯದಲ್ಲಿ ಮುಗ್ದ ಮಕ್ಕಳಿಗೆ ‘ಹಿಂದಿ ನಮ್ಮ ರಾಷ್ಟ್ರ ಭಾಷೆ’ ಅನ್ನೋ ಶುದ್ಧ ಸುಳ್ಳನ್ನ ಕಲಿಸಲಾಯಿತು,ಬಹುಷಃ ಈಗಲೂ ಕಲಿಸಲಾಗುತ್ತಿದೆ.ಅಸಲಿಗೆ ಈ ದೇಶದಲ್ಲಿ ‘ರಾಷ್ಟ್ರ ಭಾಷೆ’ಯೇ ಇಲ್ಲ ಅನ್ನುವುದು ಬಹಳಷ್ಟು ಜನಕ್ಕೆ ತಿಳಿದಿಲ್ಲ! (ಆರ್ಟಿಕಲ್ ೩೪೩).ಜಗತ್ತಿನ ಯಾವುದೇ ಭಾಷೆ ಕಲಿಯೋದು ತಪ್ಪಲ್ಲ ಹಾಗೆ ಹಿಂದಿ ಕಲಿಯೋದು ತಪ್ಪಲ್ಲ,ಆದರೆ ಅದನ್ನ ಸುಳ್ಳು ಸುಳ್ಳೇ ರಾಷ್ಟ್ರ ಭಾಷೆ ಅದಿಕ್ಕೆ ಕಲೀರಿ ಅಂತ ಮುಗ್ದ ಮಕ್ಕಳಿಗೆ ಹೇಳಿ ಕಲಿಸೋದು ಇದ್ಯಲ್ಲ ಅದು ತಪ್ಪು.ಅಂತ ವ್ಯವಸ್ತೆಗೆ,ಜನರೆಡೆಗೆ ಧಿಕ್ಕಾರವಿರಲಿ.


ಹಾಗೆ ನೋಡಿದರೆ ಈ ತ್ರಿ-ಭಾಷ ಸೂತ್ರವೇನೋ ಒಳ್ಳೆಯದೇ.ಆದರೆ ಈಗಿನಂತೆ ಇಂಗ್ಲೀಶ್ ಹಾಗೂ ಹಿಂದಿಯನ್ನ ೨ ಭಾಷೆಗಳಾಗಿ ಕಡ್ಡಾಯವಾಗಿ ಕಲಿಸುವ ನಿರ್ಧಾರವಿದೆಯಲ್ಲ, ಅದು ಒಳ್ಳೆಯದ್ದಲ್ಲ.ಇಂಗ್ಲೀಷ್ ಬಹುತೇಕ ಜನರಿಗೆ ಅನ್ನ ಕೊಡುವ ಭಾಷೆ ಹಾಗಾಗಿ ಅದು ಕಲಿಯೋಣ.ಇನ್ನುಳಿದಂತೆ ಅವರವರ ಮಾತೃ ಭಾಷೆಯು ಅಗತ್ಯವಾಗಿ ಕಲಿಯಲೇಬೇಕು.ಸಮಸ್ಯೆಯಿರುವುದು ಮೂರನೇ ಭಾಷೆಯಲ್ಲಿ!.ಮೂರನೇ ಭಾಷೆಯಾಗಿ ಹಿಂದಿಯನ್ನ ಏಕೆ ಕಡ್ಡಾಯವಾಗಿ ಕಲಿಯಬೇಕು? ಕಲಿತು ಒಬ್ಬ ಕನ್ನಡಿಗ ಕರ್ನಾಟಕದಲ್ಲಿ ಯಾರೊಂದಿಗೆ ವ್ಯವಹರಿಸಬೇಕಿದೆ?,ಅದೇ ಇನ್ನೊಂದು ಭಾಷೆಯಾಗಿ ಯುನೆಸ್ಕೋದ ವರದಿಯಂತೆ ಭಾರತದ ಅಳಿವಿನಂಚಿನಲ್ಲಿರುವ ೧೯೬ ಭಾಷೆಗಳಲ್ಲಿ ಸೇರಿ ಹೋಗಿರುವ ನಮ್ಮ ನೆಲದ ಭಾಷೆಗಳಾದ ‘ತುಳು,ಕೊಂಕಣಿ,ಕೊಡವ’ ಭಾಷೆಗಳನ್ನೇ ಏಕೆ ನಾವು ಕಲಿಯ ಬಿಡುವುದಿಲ್ಲ ಈ ತ್ರಿಭಾಷ ನೀತಿ? ನಮ್ಮ ಆಯ್ಕೆಯ ಭಾಷೆಗಳನ್ನ ಕಲಿಯಬಿಟ್ಟರಷ್ಟೇ ಈ ತ್ರಿ ಭಾಷ ನೀತಿಗೆ ಒಂದು ಅರ್ಥ ಬರುವುದು.


ಹಿಂದಿಯನ್ನ ವಿರೋಧಿಸುವವರನ್ನ ದೇಶ ದ್ರೋಹಿಗಳು ಅನ್ನೋ ಮಟ್ಟದಲ್ಲಿ ನೋಡುವ ಮಂದಿಯೇ ಈ ದೇಶದಲ್ಲಿ ಹೆಚ್ಚಿದ್ದಾರೆ. ೧೯೪೬ ರ ಡಿಸೆಂಬರ್ ೧೦ರಂದು ಶಾಸನ ಸಭೆಯಲ್ಲಿ ನಡೆದ ಈ ಘಟನೆಯೇ ಇಂತ ಮನಸ್ಥಿತಿಗಳಿಗೆ ಒಂದು ಉದಾಹರಣೆ.


ಆ ಸದಸ್ಯನ ಹೆಸರು ಧುಲೆಕರ್.ಸದನದಲ್ಲಿ ಮಾತನಾಡ ನಿಂತವನು ಹಿಂದಿಯಲ್ಲಿ ಮಾತನಾಡುತ್ತಲೇ ಹೊರಟ, ಸಭಾಧ್ಯಕ್ಷರು ಹಿಂದಿ ಬಾರದ ಸದಸ್ಯರು ಸದನದಲ್ಲಿರುವುದರಿಂದ ಇಂಗ್ಲೀಶ್ ಬಳಸಲು ಹೇಳಿದಾಗ, ಈತ “ಹಿಂದಿ ಬರದಿರುವ ಜನ ಇಂಡಿಯಾದಲ್ಲಿರಲು ಲಾಯಕ್ಕಿಲ್ಲ’ ಅಂತ ಹೇಳಿದ್ದ.ಅಷ್ಟೇ ತೀಕ್ಷ್ಣವಾಗಿ “ಹಾಗಿದ್ದರೆ,ನಿಮಗೆ ಹಿಂದಿ-ಇಂಡಿಯ ಬೇಕೋ ಇಲ್ಲ ಪರಿಪೂರ್ಣ ಇಂಡಿಯ ಬೇಕೋ ಅನ್ನುವುದನ್ನ ನೀವೇ ನಿರ್ಧರಿಸಿ” ಅನ್ತ ಹೇಳಿದವರು ಕೃಷ್ಣಾಮಚಾರಿಗಳು.ಹಿಂದಿಯ ಹೇರಿಕೆಗಾಗಿ ಕೇಂದ್ರ ಸರ್ಕಾರ ವರ್ಷಕ್ಕೆ ೩೬ ಕೋಟಿಗಳಷ್ಟು ತೆರಿಗೆಯ ಹಣವನ್ನ ಸುರಿಯುತ್ತಿದೆ.ಯಾವ ಪುರುಷಾರ್ಥಕ್ಕಾಗಿ? ಅತ್ತ ನೋಡಿದರೆ ಈ ಮಣ್ಣಿನ ೧೯೬ ಭಾಷೆಗಳು ಅಳಿವಿನಂಚಿನಲ್ಲಿವೆ ಈ ಹಣವನ್ನ ಎಲ್ಲ ಭಾಷೆಗಳ ಅಭಿವೃದ್ದಿಗೆ ಬಳಸಿದರೆ ಒಳ್ಳೆಯದಲ್ಲವೇ.


ಹಿಂದಿ ರಾಷ್ಟ್ರ ಭಾಷೆ ಅಂತ ಹೇಳೋ ಹಸಿ ಸುಳ್ಳನ್ನ ನಿಲ್ಲಿಸಿ ಹಾಗೆ ಹಿಂದಿ ಅಂದರೆ ದೇಶ ಪ್ರೇಮ ಅನ್ನೋ ಕತೆಗಳನ್ನೆಲ್ಲ ಇಂತ ಜನರು ನಿಲ್ಲಿಸಬೇಕಿದೆ.ಹಿಂದಿಗೆ ಕೇಂದ್ರ ಸರ್ಕಾರ ಕೊಡುತ್ತಿರುವ ಅನಗತ್ಯ ಪ್ರಾಮುಖ್ಯತೆಯನ್ನ ನಿಲ್ಲಿಸಿ ಆಯಾ ರಾಜ್ಯದ ಆಡಳಿತ ಭಾಷೆಯಲ್ಲೇ ಕೇಂದ್ರವು ಆಯಾ ರಾಜ್ಯಗಳೊಂದಿಗೆ ವ್ಯವಹರಿಸಬೇಕು.ಹಾಗೆ ಮಾಡುವುದರಿನ್ದಷ್ಟೇ ಅನಗತ್ಯ ಇಂಗ್ಲೀಶ್ ಬಳಕೆಯನ್ನ ತಪ್ಪಿಸಬಹುದು.


ಅಷ್ಟಕ್ಕೂ ‘ಒಂದು ಭಾಷೆ ಸತ್ತರೆ ಅದು ಸಂಸ್ಕೃತಿಯ ಸಾವು ಅನ್ನುವುದನ್ನ ಸೋಕಾಲ್ಡ್ ದೇಶ ಭಕ್ತರು ಹಾಗೂ ಇಂಗ್ಲೀಶ್ ವಿರೋಧಿಗಳು ಅರ್ಥ ಮಾಡಿಕೊಳ್ಳಲಿ.ಅದ್ಯಾವ್ ಆಧಾರದ ಮೇಲೆ ಹಿಂದಿ ಇಲ್ಲಿಯ ರಾಷ್ಟ್ರ ಭಾಷೆ ಆಗ್ಬೇಕು ಅಂದ್ರೆ ಅದು ಬಹುಸಂಖ್ಯಾತರ ಭಾಷೆಯಪ್ಪ ಅಂತ ಮಾತನಾಡುವವರು ಒಂದು ವಿಷಯ ನೆನಪಿಟ್ಟುಕೊಳ್ಳಬೇಕು.ಉಪಖಂಡವನ್ನ ಭಾರತ ದೇಶ ಅಂತ ಹಿಡಿದಿಟ್ಟವರು ಬ್ರಿಟಿಷರು.ಅಲ್ಲಿಯವರೆಗೂ ಭಾರತ ಅನ್ನೋ ದೇಶ ಈಗಿನಂತೆ ಒಂದಾಗಿ ಇರಲಿಲ್ಲ.ಆಗ ಇಲ್ಲಿ ನಡೆಯುತಿದ್ದಿದ್ದು ಆಯಾ ಜನರ ನೆಲದ ಭಾಷೆಯೇ.ಅವರು ಹೋದ ಮೇಲೆ ನಾವೇನೋ ಇಂದು ಒಂದು ದೇಶವಾಗಿದ್ದೇವೆ.ನಮ್ಮದು ವೈವಿಧ್ಯತೆಯಲ್ಲಿ ಏಕತೆಯನ್ನ ಹೊಂದಿರುವ ದೇಶ.ಯಾವುದೋ ಒಂದು ಭಾಷೆಯ ಮೂಲಕ ಏಕತೆ ಮೂಡಿಸುತ್ತೇವೆ ಅಂತ ಹೊರಡುವ ಭ್ರಮೆಯಿಂದ ವೈವಿಧ್ಯತೆ ನಾಶವಾಗದಿರಲಿ.ವೈವಿದ್ಯತೆ ನಾಶವಾದರೆ ಅಲ್ಲಿಗೆ ಏಕತೆಯು ನಾಶವಾದಂತೆಯೇ ಸರಿ. ನಮ್ಮ ಜನರ ಭಾಷೆ ಸಂಸ್ಕೃತಿಯನ್ನ ನಾವೇ ಉಳಿಸದಿದ್ದರೆ ಬ್ರಿಟಿಷರ ಅಡಿಯಿದ್ದ ಭಾರತಕ್ಕೂ ಈಗಿನ ಸ್ವತಂತ್ರ ಭಾರತಕ್ಕೂ ವ್ಯತ್ಯಾಸವೆನಿರುತ್ತದೆ? ನಿರ್ಧರಿಸಬೇಕಾದವ್ರು ಕೇಂದ್ರ ಸರ್ಕಾರದವರು,ಉತ್ತರದ ರಾಜ್ಯಗಳವರು ಹಾಗೂ ಹಿಂದಿ ಅಂದ್ರೆ ಇಂಡಿಯ ಅನ್ನೋ ಭ್ರಮೆಯಲ್ಲಿರೋ ನಮ್ಮ ಸ್ನೇಹಿತರು,ಹಿತೈಷಿಗಳು.

ನೆನಪಿರಲಿ, ಈ ದೇಶದ ಪ್ರತಿ ಭಾಗದ ಜನರ ಭಾಷೆ,ಆಚರಣೆ,ಸಂಸ್ಕೃತಿಗಳ ಸಮ್ಮಿಲನವೇ ಭವ್ಯ ಭಾರತ ಭವಿಷ್ಯವಾಗಬೇಕು.ಆಗಷ್ಟೇ ನಮ್ಮ ನೆಮ್ಮದಿಯ ನಾಳೆಗಳಿಗಾಗಿ ತಮ್ಮ ಪ್ರಾಣಾರ್ಪಣೆ ಮಾಡಿದವರ ತ್ಯಾಗಕ್ಕೂ ಒಂದು ಗೌರವ.

ಮಿತ್ರರೆಲ್ಲರಿಗೂ ಧನ್ಯವಾದಗಳು

ಚಿತ್ರದಲ್ಲಿ ಇರುವವರು ಪತ್ರಕರ್ತ ಮಿತ್ರರಾದ ಇ.ಹೆಚ್. ಬಸವರಾಜ್, ಅರುಣ್ ಕುಮಾರ್, ಸುರೇಶ್ ನಾಡಿಗ್ , ಧನಂಜಯ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಗಿಡ್ಡಪ್ಪ, ವಿನೋದ ಹಾಗೂ ಅವರ ತಾಯಿ ಹಾಜರಿದ್ದಾರೆ.
ಮಾನ್ಯರೆ ಸಂಪದದಲ್ಲಿ ಪ್ರಕಟವಾದ " ಜೈ ಎಂದ ಬಾಲಕ ಅಂಗವಿಕಲ "ಲೇಖನಕ್ಕೆ ಮೆಚ್ಚುಗೆ ಹಾಗೂ ಕಳಕಳಿ ವ್ಯಕ್ತವಾದ ಹಿನ್ನಲೆಯಲ್ಲಿ ಸಹೃದಯಿ ಸಂಪದಿಗ ಮಿತ್ರರು ಸೇರಿದಂತೆ ಹಲವರು ವಿನೋದನಿಗೆ ಆರ್ಥಿಕ ಸಹಾಯಕ್ಕೆ ಮುಂದಾಗಿದ್ದು. ಅವರುಗಳ ಹೃದಯ ವೈಶಾಲ್ಯತೆಯನ್ನು ತೋರಿದೆ. ಹಾಗೇ ಶಿಕಾರಿಪುರದ ಕರ್ನಾಟಕ ಬ್ಯಾಂಕಿನ ರವೀಶ್ ಸೇರಿದಂತೆ ಮತ್ತಿತತರು ಕೂಡ ವಿವಿಧ ರೀತಿಯಲ್ಲಿ ಸಹಾಯ ಹಸ್ತ ಚಾಚಿದ್ದಾರೆ. ಬಂದಂತಹ ಹಣವನ್ನು ನಿಷ್ಠೆಯಿಂದ ಎಲ್ಲಾ ಗೆಳೆಯರ ಸಮ್ಮುಖದಲ್ಲಿ ಫಲಾನುಭವಿ ವಿನೋದನಿಗೆ ತಲುಪಿಸುವ ಕಾರ್ಯ ಮಾತ್ರ ನಾನು ಮಾಡಿದ್ದೇನೆ. ಹಣವನ್ನು ಆತನ ಹೆಸರಿನಲ್ಲಿ ಬ್ಯಾಂಕಿನಲ್ಲಿ ಖಾತೆಯನ್ನು ತೆರೆದು ಕೇವಲ ಶಿಕ್ಷಣಕ್ಕೆ ಮಾತ್ರ ಬಳಕೆಯಾಗುವಂತೆ ಎಚ್ಚರ ವಹಿಸಲಾಗಿದೆ. ಸಹೃದಯಿಗಳಾದ ಸಂಪದಿಗ ಮಿತ್ರರಿಗೆ, ಸಂಪದದ ಸಂಪಾದಕರಾದ ಶ್ರೀಯುತ ಹರಿಪ್ರಸಾದ್ ನಾಡಿಗರಿಗೆ ಹಾಗೇ ಸಹಾಯ ಹಸ್ತ ಚಾಚಿದ ಎಲ್ಲರಿಗೂ ಮತ್ತೊಮ್ಮೆ ಅನಂತ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ನಿಮ್ಮಗಳ ಸಹಕಾರ ಪ್ರೀತಿ ಸದಾಹೀಗೆ ಇರಲಿ.
ಸುರೇಶ್ ನಾಡಿಗ್.
9741476838

Sunday, September 12, 2010

ಜೈ ಎಂದ ಬಾಲಕ ಅಂಗವಿಕಲ


ಅಲ್ಲಿ ನೋಡು ಬಿಜೆಪಿ, ಇಲ್ಲಿ ನೋಡು ಬಿಜೆಪಿ. ಅಲ್ಲಿ ಕಮಲ, ಎಲ್ಲೆಲ್ಲೂ ಕಮಲ ಹೀಗೆಂದು ಕೂಗುತ್ತಿದ್ದ ಬಾಲಕ ಇವತ್ತು ಅಂಗವಿಕಲನಾಗಿದ್ದಾನೆ. ಆದರೆ ಇವನು ಜೀವನದಲ್ಲಿ ಶಿಕ್ಷಕನಾಗಬೇಕೆಂದು ಬಯಸುತ್ತಾನೆ. ಆತನಲ್ಲಿರುವ ಮನಸ್ಥೈರ್ಯವನ್ನು ಮೆಚ್ಚಲೇಬೇಕಾಗಿದೆ.
ಅಂಗವಿಕಲನಾದ ದುರ್ದೈವಿಯೇ ವಿನೋದ. 2004ರ ವಿಧಾನಸಭಾ ಚುನಾವಣೆ ಅಂದು ಯಡಿಯೂರಪ್ಪ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಎಂದಿನಂತೆ ಹುಚ್ಚರಾಯಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಹೊರಟಿತು. ಎಲ್ಲಾ ಹುಡುಗರಂತೆ ಈತನೂ ಕೈಯಲ್ಲಿ ಬಾವುಟ ಹಿಡಿದು ಜೈ ಜೈ ಎಂದು ಹೊರಟ. ಮೆರವಣಿಗೆ ತಾಲ್ಲೂಕು ಕಚೇರಿಯ ಸಮೀಪ ಬರುತ್ತಿದ್ದಂತೆ ಹಿಂದಿನಿಂದ ಬಂದ ಬಸ್ಸೊಂದು ಈತನ ಕಾಲ ಮೇಲೆ ಹರಿದೇ ಹೋಯಿತು. ತಲೆಕೆಡಿಸಿಕೊಳ್ಳದ ಯಡಿಯೂರಪ್ಪ ಎಂದಿನಂತೆ ನಾಮಪತ್ರ ಸಲ್ಲಿಸಿದ್ದರು.ಪುಡಿ ಕಾಸಿನ ಆಸೆಗೆ ಹೋಗಿದ್ದ ಬಾಲಕನ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿತ್ತು.

ಎಲ್ಲರೊಂದಿಗೆ ಆಡಿಕೊಂಡಿದ್ದ ವಿನೋದ ಅಂಗವಿಕಲನಾಗಿದ್ದ. ಯಾವನೋ ಒಬ್ಬ ಬಿಜೆಪಿ ಕಾರ್ಯಕರ್ತ ನಿಮಗೆಲ್ಲಾ ಹಣ ಕೊಡುತ್ತೀನಿ ಎಂದು ಮಕ್ಕಳನ್ನು ಕರೆದುಕೊಂಡು ಹೋದದ್ದೇ ಇಷ್ಟೆಲ್ಲಾ ಅವಘಡಕ್ಕೆ ಕಾರಣವಾಯಿತು. ಮನೆಯಲ್ಲಿ ಬಡತನ.ಈತ ಕಿರಿಯ ಮಗ, ಅಕ್ಕನಿಗೆ ಮದುವೆಯಾಗಬೇಕು, ಅಣ್ಣ ಕೂಲಿ ಕೆಲಸಕ್ಕೆ ಹೋಗುತ್ತಾನೆ. ಈತ ದಿನ ನಿತ್ಯ ಬಸ್ಟಾಂಡಿನಲ್ಲಿ ಹಣ್ಣು ಮಾರುತ್ತಾನೆ. ಕಟ್ಟಿಗೆ ಸೀಳುತ್ತಾನೆ,ಹಂಚು ಜೋಡಿಸುತ್ತಾನೆ, ಶಾಲೆಯ ರಜಾ ದಿನಗಳಲ್ಲಿ ಹೋಟೆಲ್ ಗಳಲ್ಲಿ ಲೋಟ ತೊಳೆಯುತ್ತಾನೆ ಹೀಗೆ ಹಲವು ಕೆಲಸಗಳನ್ನು ಮಾಡುವುದರ ಮೂಲಕ ವಾರಕ್ಕೆ 150 ರಿಂದ 200ರೂಪಾಯಿ ದುಡಿಯುತ್ತಾನೆ. ಇದು ತನ್ನ ತಾಯಿಗೆ ಸಹಕಾರಿಯಾಗುತ್ತಿದೆ ಎನ್ನುತ್ತಾನೆ. ತನ್ನ ಹಳೆಯ ಅಪಘಾತವನ್ನು ನೆನಸಿಕೊಂಡು ಅಳುತ್ತಾನೆ. ಆದರೂ ತನ್ನ ವಿದ್ಯಾಭ್ಯಾಸವನ್ನು ಬಿಟ್ಟಿಲ್ಲ. ಸರ್ಕಾರಿ ಶಾಲೆಯೊಂದರಲ್ಲಿ 8ನೇ ತರಗತಿ ಓದುತ್ತಿದ್ದಾನೆ. ನಾನು ಮುಂದೆ ಶಿಕ್ಷಕನಾಗಬೇಕು. ಎಲ್ಲರಲ್ಲೂ ಜಾಗೃತಿ ಮೂಡಿಸಬೇಕು ಎನ್ನುವ ಮನೋಭಾವವಿದೆ. ಅದರ ಕನಸನ್ನೇ ಕಾಣುತ್ತಿದ್ದಾನೆ. ಈವರೆಗೆ ಯಾವ ಜನಪ್ರತಿನಿಧಿಯೂ ಇವನಿಗೆ ಸಹಾಯ ಹಸ್ತ ಚಾಚಿಲ್ಲ. ಇವನ ಆಸೆ ಈಡೇರುತ್ತದೆಯೇ ಎನ್ನುವುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ. ಬಹುಷಃ ಉಳಿಯುತ್ತದೆ.

Saturday, September 11, 2010

ಹದಗೆಟ್ಟ ರಾಜಕೀಯ ವ್ಯವಸ್ಥೆ


ರಾಜಕೀಯ ವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎನ್ನುವುದಕ್ಕೆ ಕಡೂರು ಮತ್ತು ಗುಲ್ಬರ್ಗದ ಉಪ ಚುನಾವಣೆ ಮತ್ತೊಂದು ಉದಾಹರಣೆಯಾಗಿದೆ. ಹಣ, ಹೆಂಡ ಇಲ್ಲದೆ ಚುನಾವಣೆಯೆ ಇಲ್ಲವೇ ಎನ್ನುವಂತೆ ಮಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಎನ್ನುವುದು ಕೇವಲ ಸಾಂಕೇತಿಕವಾಗಿ ಉಳಿದಂತಿದೆ. ಅಕ್ರಮಗಳು ಎಗ್ಗಿಲ್ಲದಂತೆ ನಡೆಯುತ್ತಿದ್ದರೂ ಚುನಾವಣಾ ಆಯೋಗ, ಪೊಲೀಸ್ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ನಮಗೆ ಯಾಕೆ ಬೇಕು. ದಿನ ನಿತ್ಯ ಈ ಚುನಾವಣೆಗೆಂದೇ ಪತ್ರಿಕೆಗಳಲ್ಲಿ ಅರ್ಧ ಪೇಜ್ ಲೇಖನ ಬೇರೇ. ಜನ ಸಾಮಾನ್ಯನಿಗೆ ಬೇಕಾ ಈ ಚುನಾವಣೆ. ಮತ್ತದೇ ಕೆಸರೆರಾಚಾಟ. ಪಡಿತರ ಕಾರ್ಡ್ ಇಲ್ಲದೆ ಜನ ಪರೆದಾಡುತ್ತಿದ್ದಾರೆ. ನೆರೆ ಸಂತ್ರಸ್ತರು ದಿನ ನಿತ್ಯ ಅಳುತ್ತಿದ್ದಾರೆ. ನಿರುದ್ಯೋಗಿಗಳು ಕೆಲಸ ವಿಲ್ಲದೆ ಪರೆದಾಡುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿಗಳು ಹೊರಬಂದು ಪರೆದಾಡುತ್ತಿದ್ದಾರೆ.

ಈ ರೀತಿ ಆಟಗಳು ಆಡಲೆಂದಾ ನಾವು ಇವರನ್ನು ಆಯ್ಕೆ ಮಾಡಿ ಕಳಿಸಿರುವುದು. ಇವರಿಗೆ ಕನಿಷ್ಟ ಮಟ್ದದ ಜವಾಬ್ದಾರಿಯಾದರೂ ಇದೆಯಾ. ಹಾಗಾದರೆ ಪ್ರಣಾಳಿಕೆ ಎಂದರೆ ಏನು? ಇದನ್ನು ಅವರು ಯೋಚಿಸುತ್ತಾರಾ ಖಂಡಿತಾ ಇಲ್ಲ. ಕಾರಣ ಸ್ವಾರ್ಥ. ನಾವು ಮತ್ತು ನಮ್ಮ ಕುಟುಂಬ,ಬೆಂಬಲಿಗರು ಬದುಕಿದರೆ ಸಾಕು. ಇದೀಗ ಪ್ರತಿಯೊಂದು ಚುನಾವಣೆಗೂ ಅಭ್ಯರ್ಥಿಯ ಬಳಿ ಹಣ ಇಲ್ಲದೇ ಹೋದರೆ ಠೇವಣಿಯೂ ಸಿಗುವುದಿಲ್ಲ ಎನ್ನುವ ಮಾತಿದೆ. ಗ್ರಾ.ಪಂಗೆ 3ಲಕ್ಷ, ತಾ.ಪಂಗೆ 5ಲಕ್ಷ ಇನ್ನೂ ಜಿ.ಪಂಗೆ 10ಲಕ್ಷ, ವಿಧಾನಸಭೆಗೆ 2ಕೋಟಿ, ಲೋಕಸಭೆಗೆ 50ಕೋಟಿ. ಇದು ನಿಗದಿ ಪಡಿಸಿದ ಮೊತ್ತವಾಗಿದೆ. ಅಭ್ಯರ್ಥಿಯ ಬಳಿ ಜನ ಬೆಂಬಲವಿಲ್ಲದೇ ಹೋದರೂ ಹಣವಿದ್ದರೆ ಟಿಕೆಟ್ ಪಕ್ಷದ ಗ್ಯಾರಂಟಿ. ಇದಕ್ಕೂ ಲಂಚ.
ಈ ಮುಂಚೆ ಜನಪ್ರತಿನಿಧಿಗಳು ಎಂದರೆ ಸಾಮಾನ್ಯರ ಸಮಸ್ಯಗೆ ಸ್ಪಂದಿಸುವವರು ಎನ್ನುವ ಮಾತಿತ್ತು. ಆದರೆ ಇದೀಗ ಪಕ್ಷ ಉಳಿಸುವುದಕ್ಕೆ, ಅಧಿಕಾರ ಉಳಿಸಿಕೊಳ್ಳುವುದಕ್ಕೆ ಎಂಬಂತಾಗಿದೆ. ಯಡಿಯೂರಪ್ಪನವರು ಸಂಪುಟ ಪನರ್ ರಚನೆಯಲ್ಲಿ ಸೋಮಣ್ಣ ಹಾಗೂ ಶೋಭಾರವರನ್ನು ತೆಗೆದುಕೊಳ್ಳಬೇಕೆಂದರೆ ಈ ಎರಡು ಉಪ ಚುನಾವಣೆಗಳನ್ನು ಗೆಲ್ಲಲೇಬೇಕು. ಅದಕ್ಕೆಂದು ಇನ್ನಿಲ್ಲದ ಕಸರತ್ತು ನಡೆಯುತ್ತಿದೆ.ಜಾತಿವಾರು ಸಭೆಗಳಿಗೆ ಲೆಕ್ಕವೇ ಇಲ್ಲ. 100 ಓಟಿದ್ದರೆ 5ಲಕ್ಷ, 400 ಓಟಿದ್ದರೆ 40ಲಕ್ಷ ಈ ರೀತಿ ಮತಗಳು ಹಂಚಿಕೆಯಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದು ಕೇವಲ ಬಿಜೆಪಿ ಮಾತ್ರವಲ್ಲದೆ ಸಿದ್ದಾಂತ ಎನ್ನುವ ಜೆಡಿಎಸ್ ಹಾಗೂ ಕಾಂಗ್ರೆಸ್ ಕೂಡ ಇಂತಹ ಅಕ್ರಮಕ್ಕೆ ಮುಂದಾಗಿದೆ. ಪಕ್ಷಗಳ ಮುಖಂಡರುಗಳ ಹೊತ್ತ ಜೆರ್ಕಿನ್ ಗಳು, ಟೋಪಿಗಳು ಇನ್ನಿಲ್ಲದಂತೆ ಹಂಚಲಾಗುತ್ತಿದೆ. ಹೆಂಗಳೆಯರ ಪಕ್ಷ ಬಿಜೆಪಿ ಇನ್ನಿಲ್ಲದಂತೆ ಗೌರಿ ಬಾಗಿನದ ಜೊತೆಗೆ ಸೀರೆ, ಹಣ ರಾಜಾರೋಷವಾಗಿ ನೀಡುತ್ತಿದೆ. ಇದಕ್ಕೆ ನಾವೇನೂ ಕಡಿಮೆ ಇಲ್ಲ ಎಂಬಂತೆ ಉಭಯ ಪಕ್ಷಗಳು ಹಣ ಹಂಚಿಕೆಯಲ್ಲಿ ಹಿಂದುಳಿದಿಲ್ಲ. ಒಟ್ಟಾರೆಯಾಗಿ ಇವರೆಡೂ ಕ್ಷೇತ್ರದ ಕೆಲಸವಿಲ್ಲದ ಜನ ಸದ್ಯಕ್ಕೆ ಮಾತ್ರ ಖುಷಿಯಾಗಿದ್ದಾರೆ.
ಇದೀಗ ಸತ್ಯದ ಬಗ್ಗೆ ಪರಾಮರ್ಶಿಸೋಣ, ಇವರೆಡೂ ಕ್ಷೇತ್ರದಲ್ಲಿ ಗೆದ್ದಂತವರು ಏನು ಮಾಡುತ್ತಾರೆ ಎಂದು ಯೋಚಿಸಿದರೆ ಮತ್ತೆ ಅದೇ ಉತ್ತರ ಏನೂ ಇಲ್ಲ. ಹಾಗಾದರೆ ಇಷ್ಟೆಲ್ಲಾ ಕಸರತ್ತು ಯಾಕೆಂದರೆ ಸ್ವಾರ್ಥ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಕನಸು ಕನಸಾಗಿಯೇ ಉಳಿದಿದೆ. ಇಲ್ಲಿನ ಸಾಕಷ್ಟು ಸಮಸ್ಯೆ ಇದ್ದರೂ ಈವರೆಗೆ ಬಗೆಹರಿಸದ ರಾಜಕಾರಣಿಗಳು ಇದೀಗ ಭರವಸೆಯ ಸುರಿಮಳೆ ಹರಿಸುತ್ತಿದ್ದಾರೆ. ಬುದ್ದಿವಂತರು ಎನ್ನುವರು ಓಟು ಮಾಡುವುದೇ ಇಲ್ಲ. ಈ ಸತ್ಯ ಬಿಬಿಎಂಪಿ ಚುನಾವಣೆಯಲ್ಲಿ ಪ್ರೂವ್ ಆಗಿದೆ. ಯಾವುದೋ ಗಣಿ ಹಗರಣದ ಬಗ್ಗೆ ಮಾತನಾಡುವ ಇವರಿಗೆ ಸಾಮಾನ್ಯನ ಕಷ್ಟ ಗೊತ್ತಿದೆಯಾ. ಖಂಡಿತಾ ಇಲ್ಲ. ಬಿಜೆಪಿ ಗೆದ್ದರೆ ಯಡಿಯೂರಪ್ಪನವರಿಗೆ ಮತ್ತೊಂದು ಗರಿ. ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸೋನಿಯಾಗೆ ಹತ್ತಿರ. ಜೆಡಿಎಸ್ ಗೆದ್ದರೆ ಮತ್ತದೇ ನೈಸ್,ಗಣಿ ವಿವಾದಕ್ಕೆ ಮುಂದಾಗುವುದು. ಪ್ರತಿಯೊಂದು ತಾಲ್ಲೂಕಿನಿಂದಲೂ ಜಾತಿವಾರು ಮುಖಂಡರುಗಳು ಇವೆರಡೂ ಕ್ಷೇತ್ರಗಳಿಗೆ ತೆರಳಿದ್ದಾರೆ. ಅವರುಗಳ ಮನವೊಲಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಕೇಳಿದರೆ ನಮ್ಮ ಕೆಲಸಗಳು ಸುಲಭವಾಗುತ್ತದೆ ಎನ್ನುತ್ತಾರೆ. ಇಂತಹ ಚುನಾವಣೆಗಳು ನಮಗೆ ಬೇಕಾ. ಅನುಕಂಪದ ಆಧಾರದ ಮೇಲೆ ಓಟು ಕೇಳುವುದು, ಹಣದ ಆಧಾರದಲ್ಲಿ ಓಟು ಕೇಳುವುದು ಇವೆಲ್ಲಾ ಸಾಮಾನ್ಯವೆನ್ನುವುದಾದರೆ ನೇರವಾಗಿ ಅಭ್ಯರ್ಥಿಯನ್ನು ಕೋಟಿ ಆಧಾರದ ಮೇಲೆ ಆರಿಸುವುದು ಉತ್ತಮ. ಅಧಿಕಾರಿಗಳ ಸಮಯ, ಪತ್ರಿಕೆಗಳ ಜಾಗವಾದರೂ ಉಳಿಯುತ್ತದೆ.ಅಲ್ಲವಾ.

೧೯೪೭ರ ಸ್ವಾತಂತ್ರ್ಯದ ಸೂರ್ಯನ ನೋಡಲು ಸುಭಾಷರು ‘ಬದುಕಿದ್ದರಾ!?’



ಚಿನ್ನದ ಮೊಟ್ಟೆಯಿಡುವ ‘ಐ.ಸಿ.ಎಸ್’ ಅನ್ನು ಎಡಗಾಲಲ್ಲಿ ಒದ್ದು ಬಂದಾಗ ಅವರ ವಯಸ್ಸು ೨೩, ಹಾಗೆ ಸರ್ಕಾರಿ ಪದವಿ ನಿರಾಕರಿಸಿ ಇಂಗ್ಲೆಂಡ್ನಿಂದ ಸೀದಾ ಮುಂಬಯಿಗೆ ಬಂದಿಳಿದವರು ಮೊದಲು ಭೇಟಿ ಮಾಡಿದ್ದು ‘ಮಹಾತ್ಮ ಗಾಂಧಿಜಿ’ಯವರನ್ನು.ಮಹಾತ್ಮರ ಸಲಹೆಯಂತೆ ‘ದೇಶ ಬಂಧು’ ಚಿತ್ತರಂಜನ ದಾಸ್ರವರೊಂದಿಗೆ ಭಾರತದ ಸ್ವಾತಂತ್ಯ್ರ ಹೋರಾಟಕ್ಕೆ ಧುಮುಕಿ ಮುಂದಿನ ೨೫ ವರ್ಷಗಳಲ್ಲಿ , ೪೦೦೦೦ -೪೫೦೦೦ ಜನರ ‘ಆಜಾದ್ ಹಿಂದ್ ಫೌಜ’ ಎಂಬ ಸೇನೆಯನ್ನು ಮುನ್ನಡೆಸಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಕನಸಿನಲ್ಲೂ ಬೆಚ್ಚಿಬೀಳುವಂತೆ ಮಾಡಿದ ಆ ಮಹಾನ್ ನಾಯಕನ ಹೆಸರು ‘ನೇತಾಜಿ ಸುಭಾಷ್ ಚಂದ್ರ ಬೋಸ್’.


ಬೋಸರು ೧೮೯೭ರ ಜನವರಿ ೨೩ ರಂದು ಒರಿಸ್ಸಾದ ಕಟಕ್ನಲ್ಲಿ ಜನಿಸಿದರು.ಜಲಿಯನ್ ವಾಲಬಾಗ್ನ ದುರಂತ ಸುಭಾಷರಲ್ಲಿ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಿತ್ತು. ತಂದೆ ಜಾನಕಿನಾಥ ಬೋಸ್ ಮಗ ಎಲ್ಲಿ ‘ಸ್ವಾತಂತ್ಯ್ರ ಹೋರಾಟ’ ಹಾದಿ ಹಿಡಿದುಬಿಡುತ್ತಾನೋ ಎಂಬ ಚಿಂತೆಯಲ್ಲೇ ಅವರನ್ನು ‘ಐ.ಸಿ.ಎಸ್’ಪರೀಕ್ಷೆ ಬರೆಯಲು ಇಂಗ್ಲೆಂಡ್ಗೆ ಕಳಿಸಿದರು,ಆ ಪರೀಕ್ಷೆಯಲ್ಲಿ ೪ನೆಯವರಾಗಿ ತೇರ್ಗಡೆ ಹೊಂದಿದ ಸುಭಾಷರು ಬ್ರಿಟಿಷ್ ಸರ್ಕಾರದ ಪದವಿಯನ್ನು ನಿರಾಕರಿಸಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು.ಕಾಂಗ್ರೆಸ್ಸ್ ಸೇರಿದ ಕೆಲ ವರ್ಷಗಳಲ್ಲೇ ಮೊದಲ ಸಾಲಿನ ನಾಯಕರಲ್ಲಿ ಒಬ್ಬರಾದರು.

೧೯೩೮ ರಲ್ಲಿ ನಡೆದ ೫೧ನೇ ಹರಿಪುರದ ಕಾಂಗ್ರೆಸ್ಸ್ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.೧೯೩೯ರಲ್ಲಿ ಮತ್ತೊಮ್ಮೆ ಕಾಂಗ್ರೆಸ್ಸಿನ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಸುಭಾಷರು ತೀರ್ಮಾನಿಸಿದರು.ಅಲ್ಲಿಯವರೆಗೂ ಕಾಂಗ್ರೆಸ್ಸಿನಲ್ಲಿ ಗಾಂಧೀಜಿ ಸೂಚಿಸಿದವರೆ ಅಧ್ಯಕ್ಷರಾಗುತಿದ್ದರು, ಆದರೆ ಸುಭಾಷರ ಈ ತೀರ್ಮಾನ ಗಾಂಧೀಜಿ ಹಾಗೂ ಅವರ ಅನುಯಾಯಿಗಳಿಗೆ ಸಹ್ಯವಾಗಲಿಲ್ಲ.ಆದರೆ ಯಾವುದೇ ವೈಯುಕ್ತಿಕ ಹಿತಾಸಕ್ತಿಗಳಿಲ್ಲದೆ ಕೇವಲ ದೇಶದ ಹಿತಾಸಕ್ತಿಗಾಗಿ ನಿರ್ಧಾರದಿಂದ ಸುಭಾಷರು ಹಿಂದೆ ಸರಿಯಲಿಲ್ಲ ,ಅಂತಿಮವಾಗಿ ಗಾಂಧೀಜಿ ಬೆಂಬಲಿತ ‘ಪಟ್ಟಾಭಿ ಸೀತಾರಾಮಯ್ಯ’ ಹಾಗೂ ‘ಸುಭಾಷ್’ರ ನಡುವೆ ನೇರ ಹಣಾಹಣಿ ನಡೆದು,ಚುನಾವಣೆಯಲ್ಲಿ ಸುಭಾಷರು ಜಯಶಾಲಿಯಾದರು.

ಈ ಬೆಳವಣಿಗೆಯಿಂದ ಅಸಮಾಧಾನಗೊಂಡ ಗಾಂಧೀಜಿ “ಇದು ಪಟ್ಟಾಭಿಯವರ ಸೋಲಲ್ಲ ,ಬದಲಿಗೆ ನನ್ನದೇ ಸೋಲು.ಇಂದು ಹಿಂದೆ ಮುಂದೆ ಅರಿಯದೆ ಈ ಜನ ಅವರನ್ನು ಬೆಂಬಲಿಸಿದ್ದಾರೆ.ಯಾರಿಗೆ ಕಾಂಗ್ರೆಸ್ಸಿನಲ್ಲಿರುವುದು ಅಹಿತಕರವೆನ್ನಿಸುವುದೋ ಅವರು ಬೇರೆ ದಾರಿ ನೋಡಿಕೊಳ್ಳಬಹುದು” ಅಂತ ವೈಯುಕ್ತಿಕ ಮಟ್ಟದ ಹೇಳಿಕೆ ನೀಡಿಬಿಟ್ಟರು.ಮುಂದೆ ಕಾಂಗ್ರೆಸ್ಸ್ ಕಾರ್ಯಕಾರಿಣಿಯ ಸದಸ್ಯರ ನೇಮಕಾತಿ ವಿಷಯದಲ್ಲಿ ನಡೆದ ರಾಜಕೀಯದಿಂದಾಗಿ ಮನ ನೊಂದ ಸುಭಾಷರು ಕಾಂಗ್ರೆಸ್ಸ್ ತೊರೆದು ‘ಫಾರ್ವರ್ಡ್ ಬ್ಲಾಕ್’ ಸ್ಥಾಪಿಸಿದರು.

ಫಾರ್ವರ್ಡ್ ಬ್ಲಾಕ್ನ ಮೂಲಕವೇ ತಮ್ಮ ಹೋರಾಟ ಮುಂದುವರೆಸಿದ ಸುಭಾಷರನ್ನು ೧೯೪೧ ರಲ್ಲಿ , ಬ್ರಿಟಿಷ್ ಸರ್ಕಾರ ೧೧ನೆ ಹಾಗೂ ಕಡೆಯ ಬಾರಿಗೆ ಬಂಧಿಸಿತು, ಸುಭಾಷರ ಆರೋಗ್ಯ ಸರಿಯಿಲ್ಲವಾಗಿದ್ದರಿಂದಾಗಿ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಯ್ತು.ಹಾಗೆ ಗೃಹ ಬಂಧನದಲ್ಲಿರುವಾಗಲೇ ಸುಭಾಷರು ಯಾರು ಊಹಿಸದ ಯೋಜನೆ ಮಾಡಿಬಿಟ್ಟಿದ್ದರು.ಗೃಹ ಬಂಧನದಿಂದ ತಪ್ಪಿಸಿಕೊಂಡ ಸುಭಾಷರು ಹೋಗಿ ತಲುಪಿದ್ದು ಜರ್ಮನಿ!.

ಅಲ್ಲಿಂದ ಮುಂದೆ ಶುರುವಾಗಿದ್ದೆ ಭಾರತ ಸ್ವಾತಂತ್ಯ್ರ ಚಳುವಳಿಯ ರೋಚಕ ಇತಿಹಾಸ ಅದೇ ‘ಐ.ಎನ್.ಎ’ ಅಭಿಯಾನ.ಜಪಾನ್ನಲ್ಲಿ ಶುರುವಾದ ಸುಭಾಷರ ಈ ಅಭಿಯಾನವೇ,ಭಾರತದಲ್ಲಿ ‘ಭಾರತ ಬಿಟ್ಟು ತೊಲಗಿ’ ಚಳುವಳಿ ಆರಂಭವಾಗುವಂತೆ ಮಾಡುವಲ್ಲಿ ಮುಖ್ಯ ಪಾತ್ರವಹಿಸಿದ್ದು .

ಅದು ಎರಡನೇ ಮಹಾಯುದ್ಧದ ಕಾಲ.ಜರ್ಮನಿ,ಜಪಾನ್ ಒಂದು ಬಣದ ನೇತೃತ್ವ ವಹಿಸಿದ್ದರೆ,ಅಮೆರಿಕ,ಬ್ರಿಟನ್,ರಷ್ಯ ಇನ್ನೊದು ಬಣದಲ್ಲಿದ್ದವು.ನಮ್ಮ ಸ್ವಾತಂತ್ಯ್ರ ಹೋರಾಟಕ್ಕೆ ಬೆಂಬಲ ನೀಡಿದ್ದು ಹಿಟ್ಲರನ ಜರ್ಮನಿ, ಟೋಜೊನ ಜಪಾನ್.ಅದರಲ್ಲೂ ಜಪಾನಿಯರ ಸಹಾಯ ಬಹಳ ದೊಡ್ಡ ಮಟ್ಟದಲ್ಲಿತ್ತು.ಸುಭಾಷರನ್ನು ಅವರು ನಡೆಸಿಕೊಂಡಷ್ಟು ಗೌರವಯುತವಾಗಿ ಭಾರತವೇ ನಡೆಸಿಕೊಂಡಿಲ್ಲ ಅಂದರು ತಪ್ಪಿಲ್ಲವೇನೋ. ಜರ್ಮನಿ ಸರ್ಕಾರದ ಸಹಾಯದಿಂದ ‘ಆಜಾದ್ ಹಿಂದ್ ರೇಡಿಯೋ’ ಸ್ಥಾಪಿಸಿ, ಅಲ್ಲಿಂದ ಭಾಷಣ ಮಾಡಿ “ನಾನು ಸುಭಾಷ್ ಮಾತಾಡುತಿದ್ದೇನೆ , ಇನ್ನು ಬದುಕಿದ್ದೇನೆ!” ಅಂದಾಗಲೇ ಭಾರತದಲ್ಲಿ ಬ್ರಿಟಿಷರು ಬೆಚ್ಚಿ ಬಿದ್ದಿದ್ದರು.ಕ್ರಾಂತಿಕಾರಿಗಳಲ್ಲಿ ಹೋರಾಟ ಉತ್ಸಾಹ ನೂರ್ಮಡಿಯಾಗಿತ್ತು.

೧೯೪೩ರ ಅಕ್ಟೋಬರ್ ೨೩ರಂದು ಸುಭಾಷರು ಜಪಾನ್ನಲ್ಲಿ ಸ್ವತಂತ್ರ ಭಾರತದ ‘ಹಂಗಾಮಿ ಸರ್ಕಾರ’ವನ್ನು ಸ್ಥಾಪಿಸಿ ‘ಮೊದಲ ಪ್ರಧಾನ ಮಂತ್ರಿ’ಯಾದರು , ಆ ಸರ್ಕಾರಕ್ಕೆ ಅಗತ್ಯವಾಗಿದ್ದ ಆಡಳಿತ ವ್ಯವಸ್ಥೆಯನ್ನು ಮಾಡಿದ್ದರು.ಅತಿ ಕಡಿಮೆ ಸಮಯದಲ್ಲೇ ನಾಣ್ಯ ವ್ಯವಸ್ಥೆ,ಸಂವಿಧಾನ ಎಲ್ಲವನ್ನು ಮಾಡಲಾಗಿತ್ತು ಅಂದರೆ ಸುಭಾಷರ ದೂರದರ್ಶಿ ವ್ಯಕ್ತಿತ್ವ ಹಾಗೂ ಅದೆಷ್ಟು ವೇಗವಾಗಿ ಕೆಲಸ ಮಾಡುತಿದ್ದರು ಎಂಬುದು ತಿಳಿಯುತ್ತದೆ ಮತ್ತು ಆ ಹಂಗಾಮಿ ಸರ್ಕಾರಕ್ಕೆ ‘ಜರ್ಮನಿ,ಜಪಾನ್,ಚೀನಾ,ಸಿಂಗಾಪುರ’ ಸೇರಿದಂತೆ ಇನ್ನು ಹಲ ರಾಷ್ಟ್ರಗಳು ಮಾನ್ಯತೆ ನೀಡಿದ್ದವು. ಹಂಗಾಮಿ ಸರ್ಕಾರ ಸ್ಥಾಪನೆಯಾದ ಕೆಲ ದಿನಗಳಲ್ಲೇ ಸುಭಾಷರು ಅಧಿಕೃತವಾಗಿ ‘ಮಿತ್ರ ಕೂಟ’ಗಳ (ಅದೇಕೆ ‘ನಮ್ಮ’ ಇತಿಹಾಸದಲ್ಲೂ ಇವರು ‘ಮಿತ್ರ’ರೋ?) ಮೇಲೆ ಯುದ್ಧ ಘೋಷಿಸಿದರು.ಆಗ ಶುರುವಾಗಿದ್ದೆ ‘ಐ.ಎನ್.ಎ’ ಅಭಿಯಾನ.

ಸುಭಾಷರು ‘ಐ.ಎನ್.ಎ’ ಸ್ಥಾಪಿಸಿದರು ಅಂತಲೇ ಓದಿಕೊಂಡು ಬಂದವರಿಗೆ, ಬಹುಷಃ ಈ ‘ಐ.ಎನ್.ಎ’ಯನ್ನು ಹುಟ್ಟು ಹಾಕಿದ್ದು ಮತ್ತೊಬ್ಬ ಹಿರಿಯ ಕ್ರಾಂತಿಕಾರೀ ‘ರಾಸ್ ಬಿಹಾರಿ ಬೋಸ್’ ಎಂಬುದು ತಿಳಿದಿರಲಿಕ್ಕಿಲ್ಲ. ಸುಭಾಷರು ಸ್ಥಾಪಿಸಿದ್ದು ‘ಇಂಡಿಯಾ ಲಿಜಾನ್’ ಅನ್ನುವ ಸಂಘಟನೆ. ರಾಸ್ ಬಿಹಾರಿ ಬೋಸರು ನಂತರ ಸುಭಾಷರ ಸುಪರ್ಧಿಗೆ ‘ಐ.ಎನ್.ಎ’ ಅನ್ನು ಹಸ್ತಾಂತರಿಸಿದರು. ಯುದ್ಧ ಶುರುವಾದ ಕೆಲ ದಿನಗಳಲ್ಲೇ ಜಪಾನಿ ಪಡೆ ‘ಅಂಡಮಾನ್ ಹಾಗೂ ನಿಕೋಬಾರ್’ ದ್ವೀಪಗಳನ್ನು ವಶಪಡಿಸಿಕೊಂಡಿತು.ಸುಭಾಷರು , ಟೋಜೋನೊಂದಿಗೆ ಮಾತಾಡಿ ಅವೆರಡನ್ನು ‘ಐ.ಎನ್.ಎ’ ಸುಪರ್ದಿಗೆ ತೆಗೆದುಕೊಂಡು ‘ಸ್ವರಾಜ್ ಹಾಗೂ ಶಹೀದ್’ ಎಂದು ನಾಮಕರಣ ಮಾಡಿದರು.

ಸ್ವತಂತ್ರ ಭಾರತದ ಮಣ್ಣಿನ ಮೇಲೆ ಕಾಲಿಟ್ಟ ‘ಐ.ಎನ್.ಎ’ ಸೈನಿಕರು ಪುಳಕಿತರಾಗಿದ್ದರು.ಅತ್ತ ಸುಭಾಷರು ಮುಟ್ಟಿಸಿದ ಬಿಸಿಗೆ , ಇತ್ತ ಗಾಂಧೀಜಿ ‘ಭಾರತ ಬಿಟ್ಟು ತೊಲಗಿ’ ಚಳುವಳಿಗೆ ಕರೆ ನೀಡಬೇಕಾಗಿ ಬಂತು. ಈಗಿನ ಮಣಿಪುರದ ರಾಜಧಾನಿ ‘ಇಂಫಾಲ್’ ಹಾಗೂ ಕೊಹಿಮಾ ಕೂಡ ಐ.ಎನ್.ಎ ಕೈ ವಶವಾಗಿತ್ತು.ಆದರೆ ಮಹಾ ಯುದ್ಧದಲ್ಲಿ ಬ್ರಿಟಿಷ್ ಮಿತ್ರ ಕೂಟಗಳ ಕೈ ಮೆಲಾಗುತ್ತ ಬಂತು ಹಾಗೆ,ಪ್ರತಿಕೂಲ ಹವಾಮಾನ ಇತ್ಯಾದಿ ಕಾರಣಗಳಿಂದಾಗಿ ‘ಐ.ಎನ್.ಎ’ ಅಭಿಯಾನ ತಾತ್ಕಾಲಿಕವಾಗಿ ಸ್ಥಗಿತವಾಯಿತು.ಸುಭಾಷರು ೧೯೪೫ರ ಆಗುಸ್ತ್ನಲ್ಲಿ ತೈಪೆಯಲ್ಲಿ ನಡೆದ ವಿಮಾನಾಪಘಾತದಲ್ಲಿ ಮಡಿದರು (!) ಅನ್ನುವ ಸುದ್ದಿಗಳು ಬಂದವು ಬಹಳಷ್ಟು ಐ.ಎನ್ ಎ ಸೈನಿಕರನ್ನು ಬ್ರಿಟಿಷ್ ಪಡೆಗಳು ಬಂಧಿಸಿ ಅವರ ಮೇಲೆ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಸಿದ ‘ಕೋರ್ಟ್ ಮಾರ್ಷಲ್’ ಜನರನ್ನ ರೊಚ್ಚಿಗೆಬ್ಬಿಸಿತ್ತು, ನಂತರ ನಡೆದ ‘ನೌಕ ದಳದ’ ಬಂಡಾಯ (ಅದಕ್ಕೂ ನೇತಾಜಿಯವರ ಐ .ಎನ್.ಎ ಪರೋಕ್ಷ ಕಾರಣವೆಂದರು ತಪ್ಪಿಲ್ಲ) ಬ್ರಿಟಿಷರಿಗೆ ಚರಮ ಗೀತೆಯಾಯಿತು.

ಇನ್ನು ಭಾರತೀಯರನ್ನ ದಾಸ್ಯದಲ್ಲಿಡುವುದು ಅಸಾಧ್ಯ ಅನ್ನಿಸಿ ೧೯೪೭ರ ಆಗಸ್ಟ್ನಲ್ಲಿ ಇಲ್ಲಿಂದ ತೊಲಗಿದರು.ಭಾರತ ಸ್ವತಂತ್ರವಾಯಿತು.ಅವರೇನೋ ತೊಲಗಿದರು.ಭಾರತ ಸ್ವತಂತ್ರವು ಆಯಿತು,ಆದರೆ ಜನರನ್ನು ಬಹು ಕಾಲ ಕಾಡಿದ ಪ್ರಶ್ನೆ ಬ್ರಿಟಿಷರ ನಿದ್ದೆಗೆಡಿಸಿದ ಸುಭಾಷರು ‘ಬದುಕಿದ್ದಾರಾ!?’ ಬದುಕಿದ್ದರೆ ಎಲ್ಲಿದ್ದರು?ಸೆರೆಯಲ್ಲಿದ್ದರ? ಇದ್ದರೆ ಯಾರ ಸೆರೆಯಲ್ಲಿದ್ದರು? ಸ್ವತಂತ್ರ ಭಾರತದಲ್ಲಿ ಅಜ್ಞಾತರಾಗಿ ಬದುಕಿದ್ದರ? ಹಾಗೆ ಬದುಕುವಂತೆ ಮಾಡಿದ್ದು ಯಾರು?ಯಾಕೆ ಅವರ ಸಾವಿನ ಬಗ್ಗೆ ಸರ್ಕಾರಗಳಿಗೆ ಅಸಡ್ಡೆ? ಪ್ರಶ್ನೆಗಳು ಸಾವಿರಾರು ,ಆದರೆ ಉತ್ತರ ಕೊಡುವವರು ಯಾರು?

ಅಂದಿಗೆ ಹಿಟ್ಲರ್ ಮಣ್ಣಾಗಿದ್ದ,ಜಪಾನ್ ಸೋತು ಶರಣಾಯಿತು.ಸುಭಾಷರು ಗುಪ್ತ ಸಭೆಯೊಂದನ್ನು ನಡೆಸಿ ,ಜಪಾನಿ ಅಧಿಕಾರಿಗಳು ಹತ್ತಿದ್ದ ವಿಮಾನವನ್ನ ಹತ್ತಿದರು,ಅವರೊಂದಿಗೆ ಇದ್ದ ಮತ್ತೊಬ್ಬ ‘ಐ.ಎನ್.ಎ’ ಅಧಿಕಾರಿಯ ಹೆಸರು ‘ಹಬಿಬುರ್ ರಹಮಾನ್’.ಮುಂದೆ ತೈಪೆಯಲ್ಲಿ ಆ ವಿಮಾನ ಅಪಘಾತಕ್ಕಿಡಾಗಿ ಸುಭಾಷರು ಮರಣ ಹೊಂದಿದರು ಅಂತ ತಾವು ಸಾಯುವವರೆಗೆ ಸಾಧಿಸುತ್ತಲೇ ಬಂದವರು ಇದೆ ರಹಮಾನ್ ಅವರು.ಹಾಗೆ ಅವರು ಹೇಳಿದ್ದ?ಅಥವಾ ಅವರಿಂದ ಹೇಳಿಸಲಾಯಿತ? ಗೊತ್ತಿಲ್ಲ.

ಸ್ವತಂತ್ರ ಬಂದು ಹತ್ತು ವರ್ಷಗಳ ನಂತರ ನಮ್ಮ ಮೊದಲ ಪ್ರಧಾನಿಯವರಿಗೆ ಜ್ಞಾನೋದಯವಾಗಿ ಸುಭಾಷರ ಸಾವಿನ ಕುರಿತ ರಹಸ್ಯ ಬೇಧಿಸಲು ‘ಷಾ ನವಾಜ್ ಸಮಿತಿ’ ರಚಿಸಿದರು.ಆ ಸಮಿತಿಯವರಿಗೆ ಅದೇನು ಬೇರೆ ಕೆಲಸವಿತ್ತೋ , ದಿಡೀರ್ ಅಂತ ವರದಿ ಒಪ್ಪಿಸಿಯೇ ಬಿಟ್ಟರು.ಮುಂದೆ ‘ಖೊಸ್ಲಾ ಸಮಿತಿ’ ಎಲ್ಲ ಹೇಳಿದ್ದು ಒಂದೇ ಅವರು ವಿಮಾನಪಾಘತದಲ್ಲಿ ಮಡಿದರು ಅಂತ.ಖುದ್ದು ತೈಪೆ ಸರ್ಕಾರವೇ ಆ ದಿನ ಯಾವ ವಿಮಾನವು ಹಾರಿಲ್ಲ ಅಂದರೆ ಕೇಳುವವರು ಯಾರು ಇರಲಿಲ್ಲ.ವಾಜಪೇಯಿ ಸರ್ಕಾರದ ಸಮಯದಲ್ಲಿ ರಚನೆಯಾದ ‘ಮುಖರ್ಜಿ ಸಮಿತಿ’ ಮಾತ್ರ ಹೇಳಿದ್ದು ವಿಮಾನಪಾಘತದಲ್ಲಿ ಅವರು ಸಾವಿಗೀಡಾಗಿಲ್ಲ ಅಂತ.ಆದರೆ ಯು.ಪಿ.ಎ ಸರ್ಕಾರಕ್ಕೆ ಅದು ಹಿಡಿಸಲಿಲ್ಲ ಅನ್ನಿಸುತ್ತೆ ,ಆ ವರದಿಯನ್ನೇ ತಿರಸ್ಕರಿಸಿದರು.ಯಾಕಪ್ಪಾ ಹಿಂಗ್ ಮಾಡ್ತೀರಾ ಅಂದ್ರೆ, ನೇತಾಜಿಯವರ ಸಾವಿನ ರಹಸ್ಯ ಬಯಲಾದರೆ ಅವರ ವ್ಯಕ್ತಿತ್ವಕ್ಕೆ ದಕ್ಕೆಯಾಗುತ್ತೆ ಅಂತ ಹೇಳಿಕೆ ಕೊಟ್ಟುಬಿಟ್ಟರು. ಯಾವ್ದು ನಿಜ?ಗೊತ್ತಿಲ್ಲ.

ನೇತಾಜಿ ನಿಗೂಡ ಅಂತ್ಯವನ್ನು ಖಾಸಗಿಯಾಗಿ ತನಿಖೆ ಮಾಡ ಹೋರಾಟ ಪುರಬಿ ರಾಯ್ ಇನ್ನು ಹಲವರು ತಮಗೆ ಜೀವ ಬೆದರಿಕೆ ಬಂದಿತ್ತು ಅಂತ ಹೇಳುತ್ತಾರೆ, ಪುರಬಿ ರಾಯ್ ಅವರಿಗೆ ರಷ್ಯದ ಏಜೆಂಟ್ ಒಬ್ಬ ಸ್ಟಾಲಿನ್ ಅವರಿಗೆ ಭಾರತದ ಧೀಮಂತ(!) ನಾಯಕರೊಬ್ಬರಿಂದ ಬಂದ ಪತ್ರದ ಬಗ್ಗೆ ಹೇಳಿದ್ದರು ಎಂಬ ಮಾಹಿತಿಯಿದೆ. ಪುರಬಿ ರಾಯ್ ಅವರು ಹೆಚ್ಚಿನ ಮಾಹಿತಿ ಕಲೆ ಹಾಕಲು ಆಸಕ್ತಿ ತೋರುತಿದ್ದಂತೆ ಅವರು ಮಾಡುತಿದ್ದ ಕೆಲಸವನ್ನು ಕಳೆದುಕೊಂಡರು. ಹಾಗೆ ಹಿಂದುಸ್ತಾನ್ ಟೈಮ್ಸ್ .ಕಾಂ ನಡೆಸಿದ ತನಿಖೆಯಲ್ಲಿ ಹೇಳುವುದೇನೆಂದರೆ ನೇತಾಜಿ ಅಂದು ಸಾಯಲಿಲ್ಲ ಮರಳಿ ಭಾರತಕ್ಕೆ ಬಂದು ‘ಭಗವಾನ್ ಜಿ’ ಯಾಗಿ ಉತ್ತರ ಭಾರತದಲ್ಲಿ ಅಜ್ಞಾತರಾಗಿ ಬದುಕಿ ೧೯೮೦ರ ದಶಕದಲ್ಲಿ ಮಡಿದರು ಅಂತ.ಇದು ನಿಜವಾದರೆ ಹಾಗೆ ಅವರು ಅಜ್ಞಾತವಾಸ ಮಾಡಬೇಕಾಗಿ ಬಂದಿದ್ದರು ಹೇಗೆ?

ಈ ಎಲ್ಲದರ ಹಿಂದೆ ಯಾವುದೋ ಅಂತರಾಷ್ಟ್ರೀಯ ಪಿತೂರಿ ಇತ್ತ?ಯಾಕೆ ಅವರ ಸಾವಿನ ರಹಸ್ಯ ಬಯಲಾದರೆ ಇತರ ದೇಶಗಳ ಜೊತೆ ನಮ್ಮ ಸಂಬಂಧ ಹದಗೆಡುತ್ತದೆ? ಭಗವಾನ್ ಜಿ ಕೆಲವೊಂದು ಸಂಧರ್ಭಗಳಲ್ಲಿ ಅವರ ಸಹವರ್ತಿಗಳೊಂದಿಗೆ ಮಾತಾಡುವಾಗ ‘ಹಿಂದೆ ಕೆಲ ಜನಗಳಿಂದಾದ ಅನುಭವದಿಂದ ಪಾಠ ಕಲಿತಿದ್ದೇನೆ’ ಅನ್ನುವ ಅರ್ಥ ಬರುವಂತೆ ಮಾತಡಿದ್ದಾದರೂ ಯಾಕೆ? ನೇತಾಜಿಯವರ ಸಹವರ್ತಿಗಳೇ,ಭಗವಾನ್ ಜಿಯವರ ಸಹವರ್ತಿಗಳಾಗಿದ್ದಾದರೂ ಹೇಗೆ?

ಅಂದು ಹಿಟ್ಲರ್ ಮಣ್ಣಾಗದೆ ಇದ್ದಿದ್ದರೆ ,ಜಪಾನ್ ಸೋಲದೆ ಇದ್ದಿದ್ದರೆ, ಐ.ಎನ್ .ಎ ದಿಗ್ವಿಜಯ ಸಾಧಿಸಿದ್ದರೆ ಭಾರತ ಸುಭಾಷರನ್ನು ಮಿಸ್ ಮಾಡ್ಕೋತ ಇರ್ಲಿಲ್ಲ . ಆದರೆ ವಿಧಿಯಾಟ ಬೇರೆಯಾಗಿತ್ತು.ಸುಭಾಷರನ್ನು ಮತ್ತೆ ಕಾಣುವ ಭಾಗ್ಯ ನಮಗೆ ಸಿಗಲೇ ಇಲ್ಲ :(

ನೇತಾಜಿಯವರ ಬಗ್ಗೆ ನಮ್ಮ ಮುಂದಿನ ಪೀಳಿಗೆಗೆ ತಿಳಿಸುವುದರ ಮೂಲಕವಾದರೂ ಆ ಚೇತನಕ್ಕೆ ಚಿರ ಶಾಂತಿಯನ್ನು ಕೋರೋಣ.

ಜೈ ಹಿಂದ್

ಚಿತ್ರ ಕೃಪೆ :topnews.in
ರಾಕೇಶ್ ಶೆಟ್ಟಿಯವರ ಬ್ಲಾಗ್ ನಿಂದ ಪಡೆದಂತಹ ಲೇಖನ.ಯಥಾವತ್ತಾಗಿ ಪ್ರಕಟಿಸಲಾಗಿದೆ.

Thursday, September 9, 2010

ಗೋ ಹತ್ಯೆ ಕೇವಲ ಇಶ್ಯೂ ಆಗಬಾರದು


ಸನಾದಿಕಾಲದಿಂದಲೂ ಗೋವನ್ನು ಪೂಜಿಸುತ್ತಿರುವ ಹಿಂದೂಗಳು, ಆರಾಧ್ಯದೈವವನ್ನಾಗಿಸಿಕೊಂಡಿದ್ದಾರೆ. ಅದರ ದೇಹದಲ್ಲಿ ನೂರಾರು ದೇವತೆಗಳು ಇದ್ದಾರೆ ಎನ್ನುವ ನಂಬಿಕೆ. ಅದರ ಸಗಣಿ, ಗಂಜಲ ಎಲ್ಲಾ ಕೂಡ ಉಪಯುಕ್ತ.ಇದು ಇವತ್ತಿನ ವಿಜ್ಞಾನ ಯುಗದಲ್ಲಿ ಪ್ರೂವ್ ಆಗಿದೆ ಕೂಡ. ಇದೀಗ ಸಾಕಷ್ಟು ಔಷಧಿಗಳಿಗೆ ಬಳಕೆಯಾಗುತ್ತಿದೆ. ವಿದೇಶಿಯರು ಕೂಡ ಇದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಗೋ ಹತ್ಯೆ ಅನ್ನುವುದು ಇಂದು ನೆನ್ನೆಯದಲ್ಲ. ಕಳೆದ ಹತ್ತಾರು ವರ್ಷಗಳಿಂದ ನಡೆಯುತ್ತಲೇ ಇದೆ. ಕೆಲವರು ರಾಜಾರೋಷವಾಗಿ ತಿಂದರೆ, ಮತ್ತಿತರರು ಕದ್ದು ತಿನ್ನುತ್ತಲೇ ಇದ್ದಾರೆ. 1964r ಕಾಯ್ದೆಯ ಪ್ರಕಾರ ಗೋವುಗಳನ್ನು ಹಿಂಸಿಸಿದರೆ 25ಸಾವಿರ ದಂಡ ಹಾಗೂ 7ವರ್ಷ ಸಜೆ ಎಂದು ಇದೆ. ತಿನ್ನುವುದಕ್ಕೆಂದೇ ಕುರಿ, ಕೋಳಿಗಳು ಇದ್ದರೂ ಮನುಷ್ಯನಿಗೆ ಹೆಚ್ಚಿನ ಸಹಕಾರಿಯಾಗಿರುವ ದನ ಯಾಕೆ ಎನ್ನುವುದು ಎಲ್ಲರಲ್ಲಿನ ಪ್ರಶ್ನೆ. ಕಾರಣ ಹಣದ ಬೆಲೆ ಎನ್ನುವ ಸಾಮಾನ್ಯ ಉತ್ತರ. ಹಿಂದೂ ಹಬ್ಬಗಳು ಹೊರತು ಇತರೆ ಧರ್ಮೀಯರ ಹಬ್ಬ ಬಂತೆಂದರೆ ದನಗಳ ಮಾರಣ ಹೋಮ ನಿಶ್ಚಿತ.ರಾತ್ರಿ ಸಮಯದಲ್ಲಿ ಕಾಲೇಜು ಮೈದಾನಗಳ ಕಸಾಯಿ ಖಾನೆಗಳಾಗಿರುತ್ತದೆ.ಪೊಲೀಸರಿಗೆ ಗೊತ್ತಿದ್ದರೂ ಸುಮ್ಮನಿರುವುದು ಅನಿವಾರ್ಯತೆ. ಭಾರತ ದೇಶ ಹಿಂದೂ ದೇಶ ಅಂತಾಗಿದ್ದರೂ ಎಲ್ಲಾ ಮತದವರು ಇರುವುದರಿಂದ ಬಹುಧರ್ಮೀಯರ ದೇಶವಾಗಿದೆ. ಹಾಗಂತ ನಮ್ಮ ಮೂಲ ಧ್ಯೇಯ ಉದ್ದೇಶಗಳನ್ನು ಬಲಿಕೊಡುವುದು ಎಷ್ಟರ ಮಟ್ಟಿಗೆ ಸರಿ. ಇದೀಗ ಬಿಜೆಪಿ ಹೊಸ ಇಶ್ಯೂ ಒಂದನ್ನು ತೆಗೆದುಕೊಂಡಿದೆ. ಅದು "ಗೋಹತ್ಯಾ ನಿಷೇಧ ಮಸೂದೆ", ಗಣಿ ಗದ್ದಲದ ನಡುವೆ ನಲುಗಿರುವ ಬಿಜೆಪಿ ಸರ್ಕಾರ ತನ್ನ ಉಳಿವಿಗೆ ಗೋಹತ್ಯೆ ಬಳಸುತ್ತಿದೆ. ಇದರಿಂದ ಎಲ್ಲಿ ಬಿಜೆಪಿಗೆ ಲಾಭವಾಗುತ್ತದೋ ಎನ್ನುವ ಭಯದಲ್ಲಿ ದೇವೆಗೌಡ ಸಿದ್ದರಾಮಯ್ಯ ಇನ್ನಿಲ್ಲದಂತೆ ಭುಸಗುಟ್ಟುತ್ತಿದ್ದಾರೆ. ನಾನು ಗೋ ಮಾಂಸ ತಿನ್ನುತ್ತೇನೆ ಎನ್ನುವ ಸಿದ್ದರಾಮಯ್ಯನವರ ಬಾಲಿಶ ಹೇಳಿಕೆ. ಹಾಗೇ ಮುದಿ ದನಗಳನ್ನು ಕೇಶವ ಕೃಪಾದ ಮುಂದೆ ಕಟ್ಟುತ್ತೇನೆಂಬ ಮಾಜಿ ಪ್ರಧಾನಿ ದೇವೆಗೌಡರ ಬಾಲಿಶವಾದ ಮಾತು. ಮುಂದಿನ ತಮ್ಮ ಅಸ್ಥಿತ್ವ ಉಳಿಯಬೇಕಾದರೆ ಹಾಗೇ ಗಣಿ ಧೂಳನ್ನು ಜನರಿಂದ ಮರೆಸಿ ವಿರೋಧ ಪಕ್ಷದವರನ್ನು ಹಳೆಯುವ ಯತ್ನಕ್ಕಾಗಿ ಈ ನಿಷೇಧಕ್ಕೆ ಬಿಜೆಪಿ ನಿಶ್ಚಿತವಾಗಿ ಮುಂದಾಗಿದೆ. ಆದರೆ ಇದು ಯಶಸ್ವಿಯಾಗುತ್ತದಾ ಎನ್ನುವುದು ಮಾತ್ರ ಪ್ರಶ್ನೆ.

ರಾಜ್ಯದಲ್ಲಿ ದಿನ ನಿತ್ಯ ಒಂದಲ್ಲ ಒಂದು ರಸ್ತೆಯಲ್ಲಿ ವಾಹನಗಳು ಗೋವಿನ ಮೇಲು ಹರಿದು ಪ್ರಾಣ ತೆಗೆಯುತ್ತದೆ. ಇದೂ ಕೂಡ ಹತ್ಯೆ ತಾನೆ. ಇದರ ಬಗ್ಗೆ ಎಷ್ಟು ಕೇಸುಗಳು ದಾಖಲಾಗಿದೆ ಗೊತ್ತಿಲ್ಲ.ಅನಾಥವಾಗಿ ಸತ್ತಿರುತ್ತದೆ. ಇದರ ಬಗ್ಗೆ ಯಾರಾದರೂ ಗೋ ಸಂಘಟನೆಯವರು ಹೋರಾಡುತ್ತಾರಾ ಎಂದು ಹುಡುಕಿದರೆ ಕಾಣುವುದೇ ಇಲ್ಲ. ಇವರು ಮಸೂದೆ ಮಾಡಿದಾಕ್ಷಣ ಗೋ ಹತ್ಯೆ ನಿಂತು ಬಿಡುತ್ತದೆಯೇ, ಖಂಡಿತಾ ಇಲ್ಲ. ಕಾರಣ ನಮ್ಮಲ್ಲಿರುವ ಭ್ರಷ್ಟಾಚಾರ. ಸಾರಾಯಿ ನಿಷೇಧವಾಗಿದೆ. ಆದರೆ ಅದು ಜಾರಿಗೆ ಬಂದಿದೆಯೇ ಇಲ್ಲ. ಪ್ರತಿ ಹಳ್ಳಿಗಳಲ್ಲೂ ಕಳ್ಳಭಟ್ಟಿ,ಸೆಕೆಂಡ್ಸ್ ಮದ್ಯ ಸಿಗುತ್ತಲೇ ಇದೆ. ಜನ ಸಾಯುತ್ತಿರುವುದನ್ನು ಮಾಧ್ಯಮಗಳಲ್ಲಿ ನೋಡುತ್ತಲೇ ಇದ್ದೇವೆ. ಹಾಗಾದರೆ ಗೋ ಹತ್ಯೆ ಕೂಡ ಒಂದು ಇಶ್ಯುವಾಗಿ ಮಾತ್ರ ಉಳಿಯುತ್ತದೆ. ರಾಜ್ಯದಲ್ಲಿ ನೂರಾರು ಕಸಾಯಿ ಖಾನೆಗಳು ಇದೆ. ಸಾಕಷ್ಟು ಜನ ದಳ್ಳಾಳಿಗಳು ದನದ ಜಾತ್ರೆಯ ನೆಪದಲ್ಲಿ ಕಟುಕರಿಗೆ ಮಾರುತ್ತಾರೆ. ಗೊಡ್ಡು ಹಸುಗಳು, ಮುದಿ ಎತ್ತುಗಳನ್ನ ಕಸ ತುಂಬಿದಂತೆ ಆಟೋಗಳಲ್ಲಿ ತುಂಬಿಕೊಂಡು ಪೊಲೀಸರೆದುರೇ ರಾಜಾರೋಷವಾಗಿ ಕೊಂಡೊಯ್ಯುತ್ತಾರೆ. ಇದರ ಬಗ್ಗೆ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರೆ ಅವರುಗಳನ್ನೇ ಜೈಲಿಗೆ ಅಟ್ಟುವಂತಹ ಕಾರ್ಯವಾಗಿತ್ತಿದೆ. ಇನ್ನು ಬಿಜೆಪಿ ಮುಖಂಡರುಗಳೇ ಕಟುಕರನ್ನು ಬೆಂಬಲಿಸಿದಂತಹ ಸಾಕಷ್ಟು ಉದಾಹರಣೆಗಳು ಸಿಗುತ್ತದೆ. ಇದು ಅಲ್ಪ ಸಂಖ್ಯಾತರ ಮನವೊಲಿಕೆಯಲ್ಲವೆ. ಬಿಜೆಪಿ ಸರ್ಕಾರ ಬಂದ ನಂತರ ಎಷ್ಟು ಮದರಸಗಳು ತಲೆಯೆತ್ತಿದೆ ಎನ್ನುವುದನ್ನು ಗಮನಿಸಿದರೆ ಬಿಜೆಪಿ ಕಾಂಗ್ರೆಸ್ಸಿಗೆ ಹೊರತೇನಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
ಬಿಜೆಪಿ ನಾಯಕರುಗಳಿಗೆ ನಿಜವಾಗಲೂ ಗೋವಿನ ಬಗ್ಗೆ ಮಮಕಾರವಿದ್ದರೆ ಮೊದಲು ಪೊಲೀಸ್ ರೆಕಾರ್ಡ್ನಲ್ಲಿರುವ ಕಸಾಯಿ ಖಾನೆಗಳನ್ನು ಮುಚ್ಚಿಸಲಿ. ಅದಕ್ಕೆ ಸಂಬಂಧ ಪಟ್ಟ ದಳ್ಳಾಳಿಗಳನ್ನು ಜೈಲಿಗೆ ಅಟ್ಟಲಿ. ಹಾಗೇ ಯಾವ ರೈತ ತನ್ನ ದನಕರುಗಳನ್ನು ಕಟುಕರಿಗೆ ಮಾರುತ್ತಿದ್ದಾನೆ ಎಂದು ತಿಳಿದು ಬಂದರೆ ಅಂತವರಿಗೆ ಸರ್ಕಾರದ ಯೋಜನೆಗಳನ್ನು ತಡೆಗಟ್ಟಲಿ. ಹಾಗೇ ಬಿಜೆಪಿ ನಾಯಕರುಗಳು ಕೂಡ ಕೇವಲ ಹೋಮ, ಹವನಕ್ಕಾಗಿ ಗೋಗಳನ್ನು ಬಳಕೆ ಮಾಡದೆ ಮನೆಯಲ್ಲಿ ಕೊಟ್ಟಿಗೆ ಮಾಡಿ ಸಾಕುವಂತಾಗಲಿ. ಇಲ್ಲವಾದರೆ ಸುಖಾ ಸುಮ್ಮನೆ ಒಬ್ಬರ ಮೇಲೆ ಒಬ್ಬರು ಕೆಸರು ಎರೆಚುತ್ತಾ ರಾಜಕೀಯ ಲಾಭ ಪಡೆಯಲು ಹೋದರೆ ಇದು ಬಹಳ ದಿನ ಉಳಿಯುವುದಿಲ್ಲ. ನಿಜ ಕಾಂಗ್ರೆಸ್ ಇದ್ದ ಆಂಧ್ರಪ್ರದೇಶ, ಮಧ್ಯಪ್ರದೇಶ,ರಾಜಸ್ತಾನ್,ಗುಜರಾತ್ ನಲ್ಲಿ ನಿಷೇಧ ಮಾಡಲಾಗಿದೆ. ಇಲ್ಲಿ ಯಾಕೆ ಮಾಡುತ್ತಿಲ್ಲ ಎಂದರೆ ಮತ್ತೆ ಅದೇ ಕೊಳಕು ರಾಜಕೀಯ. ಅಲ್ಪ ಸಂಖ್ಯಾತರ ಓಲೈಕೆ. ಬಿಜೆಪಿ ಗೋ ಹತ್ಯೆ ನಿಷೇಧ ಎಂದು ಮಾತ್ರ ಹೇಳುತ್ತಿದೆ. ಈವರೆಗೆ ಕಸಾಯಿ ಖಾನೆಗಳಿಗೆ ಕಡಿವಾಣವೇ ಬಿದ್ದಿಲ್ಲ. ಬರೀ ಪ್ರತಿಭಟನೆ. ಹಿಂದೂಗಳನ್ನು ಓಲೈಸಿ, ಮುಸ್ಲಿಂಮರಿಗೆ ಮಣೆ ಹಾಕುವ ಮತ್ತೊಂದು ಕಾರ್ಯವಷ್ಟೆ. ಇದೂ ಕೂಡ ರಾಮ ಜನ್ಮಭೂಮಿ, ದತ್ತಪೀಠದಂತಹ ಇಶ್ಯೂ ಮಾತ್ರವಾಗಿ ಉಳಿಯುತ್ತದೆ. ಇವರಿಗೆ ತಾಕತ್ತಿದ್ದರೆ ಬೆಂಗಳೂರಿನ ಶಿವಾಜಿನಗರ ಮತ್ತಿತರ ಪ್ರದೇಶಗಳಲ್ಲಿ ರಾಜಾರೋಷವಾಗಿ ದನ ಕಡೆದು ತೂಗು ಹಾಕಿರುತ್ತಾರೆ. ರಾಣಿಬೆನ್ನೂರು,ಮಾಸೂರು ಹಾಗೂ ಮತ್ತಿತರೆಡೆ ರಾಜಾರೋಷವಾಗಿ ಕಡೆಯುತ್ತಾರೆ. ಮೊದಲು ಇದನ್ನು ನಿಲ್ಲಿಸಿಲಿ. ಇದೆಲ್ಲಾ ಪೊಲೀಸರಿಗೆ ತಿಳಿದಿರುವ ವಿಷಯವೇನಲ್ಲ ಆದರೆ ಯಾಕೆ ಬೇಕು ಎನ್ನುವ ತಿರಸ್ಕಾರ ಮನೋಭಾವ.
ಇದೊಂದು ಉತ್ತಮ ಮಸೂದೆಯಾದರೂ ಇದು ಬಳಕೆಯಾಗುವ ಕ್ರಮ ಮಾತ್ರ ಗುಪ್ತವಾಗಿಯೇ ಇದೆ. ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಕಾಂಗ್ರೆಸ್ಸಿಗರು ಮತ್ತು ಜೆಡಿಎಸ್ ನವರು ಇದರಿಂದಾಗಿ ವಿನಾಕಾರಣ ಹಿಂದೂಗಳ ದ್ವೇಷ ಕಟ್ಟಿಕೊಳ್ಳುವಂತಾಗಿದೆ. ಅವರು ಬುದ್ದಿವಂತರಾಗಿದ್ದರೆ ಮಸೂದೆ ಜಾರಿಗೆ ತಂದ ಮೇಲೆ. ಅದರ ಲೋಪದೋಷಗಳನ್ನು ಜನರಿಗೆ ಎತ್ತಿ ಹಿಡಿದದಿದ್ದರೆ, ಕಡೂರು, ಗುಲ್ಬರ್ಗ ಉಪಚುನಾವಣೆಗೆ ಸ್ವಲ್ಪನಾದರೂ ಲಾಭವಾಗುತ್ತಿತ್ತು ಏನೋ. ಆದರೆ ಅವರಿಗೆ ಗಣಿ ಬಿಟ್ಟು ಬೇರೆ ಏನು ಗೊತ್ತಿಲ್ಲದಂತೆ ಕಾಣುತ್ತದೆ. ಬಿಜೆಪಿಯ ಚಾಣಾಕ್ಷತೆಗೆ ಗೋ ಹತ್ಯಾ ನಿಷೇಧ ಕಾಯ್ದೆ ಉತ್ತಮ ಉದಾಹರಣೆಯಾಗಿದೆ. ಇದೀಗ ಅರಣ್ಯ ಭೂಮಿಯಲ್ಲಿನ ಬಗರ್ ಹುಕಂ ವಿವಾದದಲ್ಲೂ ಬಿಜೆಪಿ ಕೇಂದ್ರದ ಮೇಲೆ ಒತ್ತಡ ಹಾಕುವುದರ ಮೂಲಕ ವಿರೋಧ ಪಕ್ಷದವರನ್ನು ಜನರೆದುರು ನಗೆಪಾಟಿಲಿಗೆ ಈಡು ಮಾಡುತ್ತಿರುವುದಂತೂ ಸುಳ್ಳಲ್ಲ. ಯಡಿಯೂರಪ್ಪನವರ ಹಲವಾರು ದಿನಗಳ ರಾಜಕೀಯ ಬುದ್ದಿ ಈಗ ಚೆನ್ನಾಗಿಯೇ ಕೆಲಸ ಮಾಡುತ್ತಿದೆ.

Monday, June 28, 2010

ಅಪರೂಪದ ವಿಶಿಷ್ಟ ಕಲಾವಿದ ಕಾಶಿ



ಕಲೆಯೆನ್ನುವುದು ಎಲ್ಲರಲ್ಲಿರುತ್ತೆ ಆದರೆ ವಿಶೇಷವಾದ ಕಲೆಗಳು ಕೆಲವರಿಗೆ ಮಾತ್ರ ಒಲೆದಿರುತ್ತದೆ. ಅದರಲ್ಲೂ ವಿಗ್ರಹ ಕೆತ್ತನೆ ಮತ್ತು ಸಿಮೆಂಟ್ ವಿಗ್ರಹಗಳನ್ನು ರೂಪಿಸುವಂತಹ ಕಲೆ ಬಹಳ ವಿಶಿಷ್ಟ. ಅಂತಹ ಕಲೆಯನ್ನು ಕರಗತ ಮಾಡಿಕೊಂಡು ಇಂದು ದೇಶಾದ್ಯಂತ ಪ್ರಸಿದ್ದಿಯಾಗಿರುವ ಕಾಶಿನಾಥ್ ಶಿಕಾರಿಪುರದವರು ಎನ್ನುವುದಕ್ಕಿಂತ ಕರ್ನಾಟಕ ರಾಜ್ಯದವರು ಎನ್ನುವುದಕ್ಕೆ ನಮಗೆಲ್ಲರಿಗೂ ಹೆಮ್ಮೆ.

ಶಿಕಾರಿಪುರದ ಹುಚ್ಚರಾಯಸ್ವಾಮಿ ಕೆರೆಯ ತಟದಲ್ಲಿ ನಿರ್ಮಾಣವಾಗಿರುವ ಈಶ್ವರ ವಿಗ್ರಹ




ಇವರು ಕಳೆದ ಹತ್ತಾರು ವರ್ಷಗಳಿಂದ ಕಲ್ಲು ಕೆತ್ತನೆ, ಸಿಮೆಂಟ್ ವಿಗ್ರಹಗಳ ಸ್ಥಾಪನೆ ಸೇರಿದಂತೆ ವಿವಿಧ ಪುರಾತನ ಶಿಲ್ಪಕಲೆಗಳನ್ನು ರಚಿಸುವುದರ ಮೂಲಕ ಬಹಳಷ್ಟು ಪ್ರಸಿದ್ದಿ ಪಡೆದಿದ್ದಾರೆ. ಇವರು ನಿರ್ಮಿಸಿರುವ ಸಣ್ಣ ವಿಗ್ರಹಗಳು ಇಂದು ಜಗತ್ತಿನ ಸಾಕಷ್ಟು ದೇಶಗಳಲ್ಲಿ ಕಂಡು ಬರುತ್ತಿದೆ.

ಬೆಂಗಳೂರಿನ ಕಿಡ್ಸ್ ಕೆಂಪಿನ ಬಳಿ ನಿರ್ಮಾಣವಾಗಿರುವ ಈಶ್ವರ ವಿಗ್ರಹ




ಕಾಶಿನಾಥ್ ಮೂಲತಃ ಶಿಕಾರಿಪುರದವರು. ಇವರ ಕೃಷ್ಣರಾವ್ ಮತ್ತು ಪಾರ್ವತಮ್ಮ ದಂಪತಿಗಳ ಹಿರಿಯ ಪುತ್ರರು. ಸಿರಿವಂತರೇನು ಅಲ್ಲ. ಅವತ್ತಿನ ಗಂಜಿಗೆ ಅವತ್ತಿನ ದುಡಿಮೆ ಎನ್ನುವಂತಹ ಮನೆತನ. ಇವರ ಕುಟುಂಬದ ಸದಸ್ಯರೆಲ್ಲರೂ ಮರಗಳ ಹಾಗೂ ಕಲ್ಲಿನ ಕೆತ್ತೆನೆ ಮಾಡುವ ಕಾಯಕದವರು. ಹಾಗಾಗಿ ಬಾಲ್ಯದಿಂದಲೇ ಕಾಶಿರವರಲ್ಲಿ ಕೆತ್ತನೆ ಕಲೆ ಬಗ್ಗೆ ಆಸಕ್ತಿ ಮೂಡಿತು. ಶಿಕಾರಿಪುರದ ಪರಸಪ್ಪ ಚಿತ್ರಗಾರ್ ಎಂಬುವರಲ್ಲಿ ಕೆಲಸಕ್ಕೆ ಸೇರಿದರು. ಪ್ರಾರಂಭದಲ್ಲಿ ಸಣ್ಣ, ಪುಟ್ಟ ಕೆಲಸಗಳನ್ನು ಮಾಡಿಕೊಂಡಿರುತ್ತಿದ್ದ ಕಾಶಿ ನಂತರ ಕಲ್ಲಿನ ಕೆತ್ತನೆಗೆ ಮುಂದಾದರು.

ಮುರುಡೇಶ್ವರದಲ್ಲಿ ಸಮುದ್ರದ ತಟದಲ್ಲಿರುವ ಸಿಮೆಂಟಿನ ಈಶ್ವರ ವಿಗ್ರಹ



ರಾಜ್ಯದ ಹಲವೆಡೆ ತಮ್ಮ ಗುರುಗಳಾದ ಪರಸಪ್ಪನವರ ಜೊತೆ ಕಲ್ಲಿನ ವಿಗ್ರಹಗಳ ಕೆತ್ತನೆಯನ್ನು ಮಾಡಿದರು. "ಆ ದಿನಗಳನ್ನು ಅವರು ನೆನಸಿಕೊಳ್ಳುವುದು ಹೀಗೆ. ಆಗ ನಾವು ಹಳ್ಳಿಗಳಲ್ಲಿ ವರ್ಷಾನುಗಟ್ಟಲೆ ಮನೆ ಮಠ ಬಿಟ್ಟು ಉಳಿದುಕೊಳ್ಳುತ್ತಿದ್ದೆವು. ಆ ಸಮಯದಲ್ಲಿ ಗ್ರಾಮಸ್ತರು ನಮ್ಮಗಳಿಗೆ ಮನೆ, ದಿನ ನಿತ್ಯದ ಆಹಾರ ಸಾಮಾಗ್ರಿಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸುತ್ತಿದ್ದರು. ಕೆಲಸ ಮುಗಿದ ಮೇಲೆ ಅಲ್ಲಿಂದ ಹೊರಡಬೇಕಲ್ಲಾ ಎನ್ನುವ ಬೇಸರ ನಮ್ಮನ್ನು ಕಾಡುತ್ತಿತ್ತು ಎಂದರೆ ಗ್ರಾಮಸ್ತರ ಪ್ರೀತಿ ಅಷ್ಟರ ಮಟ್ಟಿಗೆ ಇರುತ್ತಿತ್ತು. ಹಾಗೇ ಈಗಿನಂತೆ ತಯಾರಾದ ಬಣ್ಣ ಸಿಗುತ್ತಿರಲಿಲ್ಲ. ನಾವೇ ಬಣ್ಣ ತಯಾರಿಸಬೇಕಿತ್ತು. ಹಸಿರು ಬಣ್ಣಕ್ಕೆ ಮರದ ಎಲೆಯ ರಸವನ್ನು ತೆಗೆದು ಒಣಗಿಸುತ್ತಿದ್ದೆವು. ಸುಣ್ಣದ ಕಲ್ಲಿನಿಂದ ಬಿಳಿಯ ಬಣ್ಣ, ತವರ ಸೇರಿದಂತೆ ವಿವಿಧ ಕಲ್ಲುಗಳಿಂದಲೂ ಬಣ್ಣ ತಯಾರಿಸುತ್ತಿದ್ದೆವು. ಈಗಿನ ಬಣ್ಣ ಕೆಲ ವರ್ಷವಾದ ನಂತರ ಮಸುಕಾಗುತ್ತದೆ. ಆದರೆ ಆ ಬಣ್ಣಗಳು ಇಂದಿಗೂ ತನ್ನ ನೈಜತೆಯನ್ನು ಉಳಿಸಿಕೊಂಡಿದೆ ಎಂದು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. "

ಕಾಶಿನಾಥ್



ಇವರು ಮುರುಡೇಶ್ವರದಲ್ಲಿ 40ಅಡಿಯ ಸಿಮೆಂಟಿನ ಈಶ್ವರ ವಿಗ್ರಹ, ಬೆಂಗಳೂರಿನ ಏರ್ ಪೋರ್ಟ್ ರಸ್ತೆಯಲ್ಲಿರುವ ಕಿಡ್ಸ್ ಕೆಂಪ್ ನ 50 ಅಡಿಯ ಈಶ್ವರ, ಕೋಲಾರದ ಆಂಜನೇಯ, ಹಿಮಾಚಲ ಪ್ರದೇಶದ 70 ಅಡಿಯ ಈಶ್ವರ, ಚಿತ್ರನಟ ಅರ್ಜುನ್ ಸರ್ಜಾಗೆ ಕಲ್ಲಿನಲ್ಲಿ ರೂಪಿಸಿದಂತಹ ಆಂಜನೇಯ ವಿಗ್ರಹ. ಹೀಗೆ ದೇಶದ ಹಲವೆಡೆ ಇವರು ನಿರ್ಮಿಸಿರುವ ವಿಗ್ರಹಗಳು ಸಿಗುತ್ತದೆ. ಇಷ್ಟೆ ಅಲ್ಲದೆ ವಿದೇಶಗಳಲ್ಲೂ ಇವರ ಕೆತ್ತನೆ ಕಲೆಗೆ ಸಾಕಷ್ಟು ಬೇಡಿಕೆಯಿದೆ. ದೇವಸ್ಥಾನದ ಗೋಪುರ, ಅದಕ್ಕೆ ವಿಶೇಷ ರೂಪ ಕೊಡುವ ಕೆಲಸವನ್ನು ಮಾಡುತ್ತಾರೆ. ಚಿಕ್ಕಂದಿನಲ್ಲಿ ಬಹಳಷ್ಟು ಮರದ ರಥಗಳನ್ನು ನಿರ್ಮಿಸಿರುವ ಕೀರ್ತಿಯೂ ಇವರಿಗೇ ಸಲ್ಲುತ್ತದೆ. ಇದೀಗ 70ರ ಆಸುಪಾಸಿನಲ್ಲಿರುವ ಇವರು ಹಲವಾರು ಯುವಕರಿಗೆ ಕೆಲಸ ನೀಡಿದ್ದಾರೆ. ಆದರೆ ಕಡೆಯ ಫಿನಿಷ್ ಅಂದರೆ ಕಣ್ಣು,ಮೂಗು,ತುಟಿಯನ್ನು ಮಾತ್ರ ಇವರೇ ಖುದ್ದಾಗಿ ಸ್ಥಳಕ್ಕೆ ಬಂದು ರೂಪಿಸುವುದು ಇವರ ವಿಶೇಷತೆ.
ಇವರ ಅಜ್ಜ ತಿಪ್ಪಾಜಪ್ಪ ಮೈಸೂರು ಸಂಸ್ಥಾನದಲ್ಲಿ ಸಾಂಪ್ರದಾಯಿಕ ಕಲೆಯಲ್ಲಿ ನಿಪುಣರು. ಇವರ ಕಲೆಯನ್ನು ಮೆಚ್ಚಿ ಅಂದಿನ ಮುಮ್ಮುಡಿ ಕರಷ್ಣರಾಜ ಒಡೆಯರ್ ಚಿನ್ನದ ಪದಕ ನೀಡಿ ಗೌರವಿಸಿದ್ದರು. ಇಂದಿಗೂ ಅವರು ನಿರ್ಮಿಸಿದಂತಹ ಕಲೆಗಳು ಸಾಕಷ್ಟು ಶ್ರೀಮಂತರ ಮನೆಯಲ್ಲಿದೆ. ಆ ಕಲೆಯೇ ತಮಗೆ ರಕ್ತಗತವಾಗಿ ಬಂದಿದೆ ಎನ್ನುತ್ತಾರೆ. "ರಾಜ್ಯ ಪ್ರಶಸ್ತಿ," ಜಕಣಾಚಾರಿ" ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಗರಿಗಳು ಕಾಶಿರವರ ಮುಡಿಲೇರಿದೆ. ಇಷ್ಟೆಲ್ಲಾ ಪ್ರಸಿದ್ದಿ ಪಡೆದಿದ್ದರೂ ಕಾಶಿಯ ಗುಣ ಸ್ವಲ್ಪ ಮಾತ್ರವೂ ಬದಲಾಗಿಲ್ಲ. ಇದೇ ಅಲ್ಲವೇ ತುಂಬಿದ ಕೊಡ ತುಳುಕುವುದಿಲ್ಲ ಎಂದರೆ.
ಉತಮಪಡಿಸ್ಲಾಗದ ಬರಹ
ಇನ್ನೂ ಉತ್ತಮವಾಗಬಹುದು
ಒಳ್ಳೆಯ ಬರಹ
ಚೆನ್ನಾಗಿದೆ!
ಉತ್ತಮ ಬರಹ!

ಹೀಗೊಂದಿಷ್ಟು ಜೋಕ್

ಹುಡುಗಿಯೊಬ್ಬಳು ಜೂಲು ನಾಯಿಯನ್ನು ಕರೆದುಕೊಂಡು ಹೋಗುತ್ತಿದ್ದಳು. ಇವಳನ್ನು ಒಲಿಸಿಕೊಳ್ಳಬೇಕೆಂದು ಯುವಕನೊಬ್ಬ

ಯುವಕ : ಮೇಡಂ ನಾಯಿ ಸಕತ್ತಾಗಿದೆ

ಮೇಡಂ : ಓಹ್ ಥ್ಯಾಂಕ್ಸ್

ಯುವಕ : ನಾಯಿಯನ್ನು ಒಮ್ಮೆ ಮುದ್ದಾಡಲಾ

ಮೇಡಂ : ಓಹ್, ಖಂಡಿತವಾಗಿ

ಯುವಕ : ( ಮುದ್ದಾಡುತ್ತಾ ) ನಾಯಿ ನೀನು ಎಷ್ಟು ಚೆನ್ನಾಗಿದ್ದೀಯಾ. ನಿನ್ನ ಮುಖಕ್ಕೊಂದು ನನ್ನ ಮುತ್ತು.

ಮೇಡಂ : ಸರ್, ಅದರ ಮುಖ ಈ ಕಡೆ ಇದೆ.



ಹೆಂಡತಿ : ರೀ ನಿಮ್ಮ ಮೊಬೈಲ್ ಕದ್ಕೊಂಡು ಹೋಗ್ತಾ ಇದಾನೆ ಹಿಡೀರಿ.

ಗಂಡ : ಎಲ್ಲೇ ಹೋಗ್ತಾನೆ. ಬ್ಯಾಟರಿ ಖಾಲಿಯಾದ ಮೇಲೆ ನಮ್ಮ ಮನೆಗೆ ಬರಬೇಕು.

ಹೆಂಡತಿ : ಯಾಕೆ

ಗಂಡ : ಚಾರ್ಜರ್ ನಮ್ಮ ಮನೆಲೇ ಅಲ್ವಾ ಇರೋದು



4 ಜನ ಯುವಕರು ರೈಲ್ವೇ ಸ್ಟೇಷನ್ ಗೆ ಬಂದರು. ಆಗಲೇ ರೈಲು ಹೊರಟಿತ್ತು. ಅದರಲ್ಲಿ ಒಬ್ಬ ಓಡಿ ಹೋಗಿ ರೈಲಿನಲ್ಲಿ ಕೂತ. ಮಿಕ್ಕ ಮೂರು ಜನ ಸ್ಟೇಷನ್ನಲ್ಲೇ ಬೇಜಾರಿನಿಂದ ಕೂತರು. ಅಷ್ಟೊತ್ತಿಗೆ ಬಂದ ರೈಲ್ವೆ ಮಾಸ್ಟರ್ ಹೋಗ್ಲಿ ಬಿಡಿ. ಅಂತೂ ಒಬ್ಬರಾದರೂ ಹೋದರಲ್ಲ ಅಂದ. ಅದಕ್ಕೆ ಈ ಮೂವರು. ಸರ್ ಊರಿಗೆ ಹೋಗಬೇಕಾಗಿದ್ದವರು ನಾವು. ಅವನು ಸೀಟು ಹಿಡಿಯುವುದಕ್ಕೆ ಅಂತಾ ಬಂದಿದ್ದ.



ರೋಗಿಯೊಬ್ಬನಿಗೆ ಗಂಟಲು ಕೆಟ್ಟಿತ್ತು. ವೈದ್ಯರ ಮನೆಗೆ ಹೋಗಿ ಬಾಗಿಲು ಬಡೆದ. ವೈದ್ಯರ ಹೆಂಡ್ತಿ ಬಾಗಿಲು ತೆಗೆದು.

ವೈ.ಹೆಂಡ್ತಿ : ಯಾರ್ ಬೇಕಾಗಿತ್ತು

ರೋಗಿ : (ಮೆಲು ದನಿಯಲ್ಲಿ) ಡಾಕ್ಟ್ರು ಇದಾರಾ

ವೈ.ಹೆಂಡ್ತಿ : ಮೆಲು ದನಿಯಲ್ಲೇ ಅವರು ಇಲ್ಲಾ, ಒಳಗೆ ಬನ್ನಿ.



ದೀಪಾವಳಿ ಹಬ್ಬ ಸಣ್ಣ ಹುಡುಗ ಪಟಾಕಿ ಬೇಕೆಂದು ಹಠ ಮಾಡ್ತಿದ್ದ,

ಅಮ್ಮ : ಈಗಾಗಲೆ ಸಾವಿರ ರೂಪಾಯಿ ಪಟಾಕಿ ಹೊಡೆದಿದ್ದೀಯಾ ಇನ್ನು ಬೇಕಾ ಎಂದು ಬೈಯುತ್ತಾ ಅಡುಗೆ ಮನೆಗೆ ಹೋದಳು

ಹುಡುಗ : ಅಮ್ಮಾ ರೂಂನಲ್ಲಿ ಇನ್ನೊಂದು ಕೆಂಪು ಬಣ್ಣದ್ದು ದೊಡ್ಡ ಪಟಾಕಿ ಇದೆ. ಬೆಂಕಿ ಹಚ್ಲಾ.

ಅಮ್ಮ : ಅಯ್ಯೋ ಗೂಬೆ. ಅದು ಸಿಲಿಂಡರ್ ಕಣೋ



ಗುಂಡ ಬೆಂಗಳೂರಿನಿಂದ ಬಾಂಬೆಗೆ ಹೋಗಬೇಕಾಗಿತ್ತು. ರೈಲು ಫುಲ್ ರಷ್ ಆಗಿತ್ತು. ಸೀಟಿಗಾಗಿ ಏನ್ ಮಾಡ್ಬೇಕು ಅಂತಾ ಯೋಚಿಸ್ತಿದ್ದ. ಹಾವು,ಹಾವು ಅಂತಾ ಜೋರಾಗಿ ಕೂಗಿದ. ಬೋಗಿಯಲ್ಲಿ ಇದ್ದವರೆಲ್ಲಾ ಇಳಿದು ಓಡಿದರು. ಅಬ್ಬಾ ಎಲ್ಲಾ ಸೀಟು ಖಾಲಿ ಆಯ್ತಲ್ಲಾ ಹಾಗೇ ನಿದ್ದೇ ಹೋದ. ಬೆಳಗ್ಗೆ ಎದ್ದಾಗ ಬೋಗಿ ಬೆಂಗಳೂರು ಸ್ಟೇನಲ್ಲೇ ಇತ್ತು. ಯಾಕೆ ಸರ್ ಟ್ರೇನ್ ಬಾಂಬೆಗೆ ಹೋಗಲಿಲ್ವಾ. ಹೋಯ್ತಲ್ಲಾ ಅಂದ ಸ್ಟೇಷನ್ ಮಾಸ್ಟರ್. ಮತ್ತೆ ಈ ಬೋಗಿ ಇಲ್ಲೇ ಇದೆ. ಇದರಲ್ಲಿ ಹಾವು ಇತ್ತು ಅಂತಾ, ಈ ಬೋಗಿಯೊಂದನ್ನು ಬಿಟ್ಟು ಹೋಗಿದ್ದಾರೆ ಅಂದಾಗ, ಗುಂಡನ ಮುಖ ಸಪ್ಪಗೆ ಆಗಿತ್ತು.





ಮೇಷ್ಟ್ರು : ಸ್ಕೂಲಿಗೆ ಬರದೆ ಎಲ್ಲಿಗೋ ಹೋಗ್ತೀಯಾ ಅಂತಾ ಹುಡುಗನೊಬ್ಬನಿಗೆ ಹೊಡಿತಾ ಇದ್ದರು.

ಹುಡುಗನ ಅಪ್ಪ ; ಹಾಕಿ ಸರ್, ಇನ್ನೊಂದು ನಾಲ್ಕು ಹಾಕಿ

ಮೇಷ್ಟ್ರು : ನೋಡೋ ನಿಮ್ಮ ಅಪ್ಪನಿಗೆ ವಿದ್ಯಾಭ್ಯಾಸ ಎಂದರೆ ಎಷ್ಟು ಇಂಟರೆಸ್ಟ್

ಹುಡುಗನ ತಂದೆ : ಹಂಗೇನಿಲ್ಲಾ, ಬೆಳಗ್ಗೆ ಎಮ್ಮೆ ಮೇಯಿಸಲಿಕ್ಕೆ ಹೋಗು ಅಂದ್ರೆ ಇಲ್ಲಿ ಬಂದಿದಾನೆ. ಹಾಕ್ರಿ ಮೇಷ್ಟ್ರೆ.



ಮೂರು ಜನ ಹೆಂಗಸರು ಕಟ್ಟೆ ಮೇಲೆ ಕೂತು ಅವರ ಗಂಡಂದಿರ ಮರೆಗುಳಿ ತನವನ್ನು ಹೇಳುತ್ತಾ ಕೂತಿದ್ದರು.

1 : ನಮ್ಮ ಯಜಮಾನ್ರಿಗೆ ಮರೆವೂ ರೀ. ಬೆಳಗ್ಗೆ ಒಂದು ಡಬರಿ ಉಪ್ಪಿಟು ತಿಂದಿರ್ತಾರೆ. ಸ್ವಲ್ಪ ಹೊತ್ತು ಬಿಟ್ಟು ಬಂದು ಏನೇ ನಂಗೆ ತಿನ್ನಕ್ಕೆ ಏನೂ ಕೊಟ್ಟಿಲ್ಲ. ಇವತ್ತು ಏಕಾದಶಿಯೇನೇ ಅಂತಾರಿ.



2 : ನಮ್ಮ ಯಜಮಾನ್ರೂದೂ ಅದೇ ರೀ, ಆಫೀಸಿಗೆ ಹೋಗಿರ್ತಾರೀ, ಬರ್ತಾ ಛತ್ರಿನೋ ,ಬ್ಯಾಗನೋ ತಂದಿರ್ತಾರ್ರೀ. ಏನ್ರೀ ಇದು ಅಂದ್ರೆ. ನನಗೆ ಮರೆವು ಅಂತ್ಯಲ್ಲಾ ನೋಡು ಅಂತಾರೆ. ನಿಜ ನೋಡಿದರೆ ಅವರು ಆಫಿಸಿಗೆ ಛತ್ರಿ, ಬ್ಯಾಗು ತೊಗಂಡು ಹೋಗೇ ಇರಲ್ಲಾರೀ, ಯಾರದೋ ಹೊಡ್ಕೊಂಡು ಬಂದಿರ್ತಾರ್ರೀ



3 : ನಮ್ಮ ಯಜಮಾನ್ರಗೂ ಮರೆವೂ ರೀ. ರಾತ್ರಿ ಜೊತೆ ಕೂತು, ಊಟ ಮಾಡಿ, ಎಲೆ ಅಡಿಕೆ ಹಾಕ್ಕೊಂಡು, ಮಲಗೋ ತನಕಾ ಚೆನ್ನಾಗೇ ಇರ್ತಾರೆ. ಬೆಳಗ್ಗೆ ಎದ್ದು ಯಾಕೇ ಅಕ್ಕಾ ನನ್ನ ರೂಂನಲ್ಲಿ ಬಂದು ಮಲಿಗಿದಿಯಾ ಅಂತಾರ್ರೀ......

ಒಂದು ಬಸ್ನಲ್ಲಿ - ಏಕಪಾತ್ರಾಭಿನಯ

ಯಾರ್ರೀ ಸವಳಂಗ,ಶಿವಮೊಗ್ಗ,ಶಿವಮೊಗ್ಗ,ಶಿವಮೊಗ್ಗ. ಬೇಗ ಬೇಗ ಹತ್ಕೊಳ್ರಿ. ಇನ್ನು ಐದು ನಿಮಷ ಮಾತ್ರ ಇದೆ ನೋಡಿ.

ಸೇಂಗಾ,ಸೇಂಗಾ. ಮಾವಿನಕಾಯಿ, ರೂಪಾಯಿಗೆರಡು ಕಿತ್ತಲೆ,ಕಿತ್ತಲೆ, ಹಮಾಲಿ,ಹಮಾಲಿ

ಬೇಗ ಬೇಗ ಇಳೀರಿ. ಹತ್ತೋ ಬೇಗ ಅಲ್ಲಿ ಸೀಟು ಬೇರೆ ಇಲ್ಲ. ಏ ರಾಜು ಕರ್ಚೀಫ್ ಹಾಕೋ. ಏ ನಮ್ದು ಬಿಡ್ರೀ ಸೀಟು. ನಮ್ಮ ಅಪ್ಪ, ಅಮ್ಮ ಅಲ್ಲಿ ಹಿಂದಗಡೆ ಬರ್ತಾ ಇದಾರೆ. ಅಣ್ಣಾ ಮೇಲುಗಡೆ ಎರಡು ಚೀಲ ಹಾಕಿದೀನಿ 10ರೂಪಾಯಿ ಕೊಡ್ರಿ. ಹಗ್ಗ ಕಟ್ಟಿದ್ದೀನಿ ಅದೇ ನಿಮ್ಮ ಚೀಲ. ಸರಿ ಬಿಡಪ್ಪಾ. ಅಯ್ಯಯ್ಯಪ್ಪಾ ಏನ್ ಸೆಕೇರಿ. ರೀ ಡ್ರೈವರ್ ಬೇಗ ಹೋಗ್ ಬಾರದಾ. ತಡಿಯಮ್ಮಾ ಇನ್ನು ಎರಡು ನಿಮಷ ಇದೆ. ಕಂಡಕ್ಟರ್ ಒಂದ್ನಿಮಿಷ ಟಾಯ್ಲೆಟ್ ಗೆ ಹೋಗಿ ಬಂದು ಬಿಡುತ್ತೇನೆ. ಇಷ್ಟೊತ್ತನಕ ಏನ್ರೀ ಮಾಡ್ತೀದ್ರಿ ಸರಿ ಸರಿ.

ಸವಳಂಗ ಬಿಟ್ಟರೆ ಬೇರೆ ಎಲ್ಲೂ ಸ್ಟಾಪ್ ಇಲ್ಲಾ ನೋಡ್ರಿ. ಯಾರಾದರೂ ಮಧ್ಯದ ಹಳ್ಳೀಯೋರು ಇದ್ರೆ ಈಗಲೇ ಇಳ್ಕೊಂಬಿಡ್ರಿ.ಸ್ವಲ್ಪ ಮುಂದೆ ಹೋಗ್ರೀ ಬಾಗಿಲಲ್ಲೇ ನಿಂತ್ಕೊಂಡು ಸಾಯ್ತೀರಲ್ರೀ. ಪೊಲೀಸರು ಹಿಡಿದ್ರೆ ನಾವು ಪೆನಾಲ್ಟಿ ಕಟ್ಟಬೇಕು. ಟಿಕೆಟ್,ಟಿಕೆಟ್ , 2 ಶಿವಮೊಗ್ಗ ಕೊಡ್ರಿ. 60ರೂಪಾಯಿ ಕೊಡ್ರಿ. 500ರೂಪಾಯಿ ಕೊಟ್ಟರೆ ಹೇಗಮ್ಮಾ. ಚಿಲ್ಲರೆ ಇದ್ರೆ ಕೊಡ್ರಿ. ನೀವು ಎಲ್ಲಿಗ್ರಿ. ನನಗೂ ಒಂದು ಶಿವಮೊಗ್ಗ. 30ರೂಪಾಯಿ ಕೊಡ್ರಿ. 100ರೂಪಾಯಿ ಕೊಟ್ರೆ ಎಷ್ಟು ಜನಕ್ಕೆ ಅಂತಾ ಚಿಲ್ಲರೆ ಕೊಡ್ಲಿ ನೀವೇ ಹೇಳಿ. ಏ ರೋಡ್ ಲ್ಲಿ ಎರಡು ಸೀಟ್ ನಿಂತಿದಾರೆ ಎಲ್ಲಿಗೆ ಅಂತಾ ಕೇಳು. ಸಿರ್ಸಿ ಹೋಗುತ್ತಾ. ರೈಟ್,ರೈಟ್.

ರೀ ವಾಂತಿ ಮಾಡ್ ಬೇಕಾದ್ರೆ ಹೇಳೋದಲ್ವಾ. ನೋಡಿ ಮೈಮೇಲೆಲ್ಲಾ ಹಾರತಲ್ರೀ. ವಾಂತಿ ಹೇಳಿ ಕೇಳಿ ಬರುತ್ತಾ. ಕಿಟಕಿ ಹಾಕು. ಈ ಕಿಟಕಿ ಬೇರೆ ಹಾಕಿದ್ರೆ ಹಾಗೇ ತೆಕ್ಕೋಳತ್ತೆ. ಅದಕ್ಕೆ ಬಸ್ ನಿಂತಾಗ ಹಾಳು ಮೂಳು ತಿನ್ ಬೇಡ್ರಿ ಅನ್ನೋದು. ಏ ಸರಿಯಾಗಿ ನಿಂತ್ಕಳೊಕ್ಕೆ ಆಗ್ಲವಾ. ಮಕ್ಕಳು ಮರಿ ಮೇಲೆಲ್ಲಾ ಬೀಳ್ತೀರಲ್ರೀ. ಬಾರ್ ಹಿಡ್ಕೊಂಡು ನಿಂತಕ್ಳಳ್ರೀ.

ಹೆಂಗಸರು ಮೇಲೆಲ್ಲಾ ಬೀಳ್ತೀರಲ್ಲಾ ನಾಚಿಕೆ ಆಗೋಲ್ವಾ. ನಿಮಗೆ ಅಕ್ಕ, ತಂಗಿ ಯಾರು ಇಲ್ವಾ. ಎಲ್ಲಾರೂ ಇದಾರೆ ಆದರೆ ಅವರಿಗೆಲ್ಲಾ ಹೀಗೆ ಮಾಡೋಕೆ ಆಗುತ್ತಾ ಮೇಡಂ. ರೀ ನಿಲ್ಲಿಸಿರಿ. ನಮ್ಮ ಯಜಮಾನ್ರು ಟಾಯ್ಲೆಟ್ ಗೆ ಅಂತಾ ಹೋದೋರು ಬಂದೇ ಇಲ್ವಲ್ರೀ. ಅಯ್ಯೋ ನೆಕ್ಸ್ಟ್ ಬಸ್ ಗೆ ಬರ್ತಾರೆ ಬಿಡಮ್ಮ. ಎರಡು ಟಿಕೆಟ್ ಷಾರ್ಟೇಜ್ ಬರ್ತಾ ಇದೆ. ಟಿಕೆಟ್ ಮಾಡಿಸದೇ ಇರೋರು ಬೇಗ ಮಾಡ್ಸಿ. ಕಿಟಕಿ ಹಾಕಮ್ಮಾ ಮಳೆ ನೀರೆಲ್ಲಾ ಒಳಗೆ ಬರ್ತಾ ಇದೆ. ಮಗೂ ಅಳುತ್ತೆ ಅದಕ್ಕೆ ತೆಗೆದಿದ್ದೆ. ಸಾರಿ. ಏನಪ್ಪಾ ಡ್ರೈವರ್ ಹಿಂಗೆ ಹೊಡಿತಾನೆ. ಕೊನೇ ಸೀಟ್ ಲ್ಲಿ ಕೂರಕ್ಕೆ ಆಗಲ್ಲಾ. ಹೊಸಬ ಸಾರ್. ಹೇಳಿದ್ರೆ ಕೇಳಲ್ಲ. ಕಂಪೆನಿಗೆ ಕಂಪ್ಲೇಂಟ್ ಮಾಡ್ರಿ. ಅವಾಗ ಗೊತ್ತಾಗುತ್ತೆ.

ಇದು ಯಾರೀದ್ರಿ ಲಗ್ಗೇಜ್. ಟಿಕೆಟ್ ಆಗಿಲ್ವಲ್ರೀ. ಅದರಲ್ಲಿ ಬರೀ ಬಟ್ಟೆ ಮಾತ್ರ ಇದೆ. ಆದ್ರೂ ಅರ್ಧ ಟಿಕೆಟ್ ಆದ್ರೂ ತೊಗಳ್ಳೇಬೇಕು. ಚೆಕಿಂಗ್ ಬಂದ್ರೆ ನಾವು ಮನೆಗೆ ಹೋಗಬೇಕಾಗುತ್ತೆ. ಟಿವಿ ಸೌಂಡ್ ಕಮ್ಮಿ ಮಾಡಕ್ಕೆ ಹೇಳ್ರಿ.ತಲೇ ನೋವ್ತಾ ಇದೆ. ಹೊಸ ಫಿಲ್ಮ್ ಯಾವುದೂ ಇಲ್ಲ. ಯಾವಾಗ ಬಂದ್ರೂ ಇದೇ ಫಿಲ್ಮ್ ಹಾಕ್ತೀರಲ್ರೀ. ಸವಳಂಗ ಯಾರು ನೋಡ್ರಿ ಇಲ್ಲಿ ಬಿಟ್ರೆ ಇನ್ನು ಶಿವಮೊಗ್ಗನೇ. ಶಿವಮೊಗ್ಗ, ಶಿವಮೊಗ್ಗ. ಎಷ್ಟಾಗಿದೆ ಕಲೆಕ್ಷನ್. ನಿನ್ನೆಗಿಂತ ಡಲ್ಲೇ. ಮಳೆಗಾಲ ಅಲ್ವಾ ಅದಕ್ಕೆ. ರೈಟ್,ರೈಟ್.

ಸೂಪರ್ ಬೈಕ್ - 1000ಸಿಸಿ


ಮಾರುಕಟ್ಟೆಗೆ ಹೊಸದಾಗಿ 1000 ಸಿ.ಸಿ ಬೈಕ್ ನ್ನು "ಫಾರ್ಮರ್ಸ್ ಕಂಪೆನಿ"ಯಿಂದ ಬಿಡುಗಡೆ ಮಾಡಲಾಗಿದೆ. ನೋ ಪೆಟ್ರೋಲ್.

ಜಸ್ಟ್ ಒಂದು ಪೆಂಡಿ ಹುಲ್ಲು. ಒಂದು ಬಕ್ಕೆಟ್ಟು ನೀರು. ಪೆಂಡಿಗೆ/40ಕಿ.ಮೀ. ವೇಗ - 30km/hr.

ಇಂದೇ ಬುಕ್ ಮಾಡಿ. ಡೆಲಿವೆರಿ ಒಂದು ತಿಂಗಳ ನಂತರ. ಬೈಕ್ ನೊಂದಿಗೆ ಬಕ್ಕೆಟ್ ಫ್ರೀ.

ಸ್ನೇಹಿತರೆ ಸಂಪದದಲ್ಲಿ ಸಾಕಷ್ಟು ಮಾಹಿತಿಗಳು ಕೃಷಿ ಬಗ್ಗೆ ಇರುವುದನ್ನು ಗಮನಿಸಿದೆ. ಆದರೂ ಪರಿಸರದ ಬಗ್ಗೆ ಇಷ್ಟೆಲ್ಲಾ ಚರ್ಚೆ ನಡೆಯುತ್ತಿರುವಾಗ ಕೃಷಿಯ ಇದೊಂದು ವಿಷಯ ಸೇರಿಸಬೇಕು ಅನ್ನಿಸಿತು.
ಇವತ್ತು ನಾವು ಅರಣ್ಯ ಸಂಪತ್ತು ಹಾಳಾಗುತ್ತಿದೆ. ಗುಡ್ಡ ಬೆಟ್ಟಗಳೆಲ್ಲಾ ಹಾಳಾಗುತ್ತಿದೆ. ಇದು ಮುಂದಿನ ದಿನದ ಪರಿಸರ ನಾಶಕ್ಕೆ ನಾಂದಿ ಎಂದು ಎಲ್ಲರೂ ಚಿಂತಿಸುತ್ತಿದ್ದೇವೆ. ಹಾಗಾದರೆ ಇವತ್ತಿನ ಕೃಷಿ ಚಟುವಟಿಕೆ ಸರಿಯಾಗಿದೆಯಾ ಎನ್ನುವುದರ ಬಗ್ಗೆ ಕೂಡ ಚಿಂತನೆ ನಡೆಸಬೇಕಲ್ಲವೆ.




ಸಾಮಾನ್ಯವಾಗಿ ನೀರು ಹೆಚ್ಚಿನ ಮಟ್ಟದಲ್ಲಿ ಇರುವಂತವರು ತೋಟಕ್ಕೆ ಅಥವಾ ಭತ್ತದ ಬೆಳೆಗೆ ಮೊರೆ ಹೋಗುವುದನ್ನು ನಾವು ಕಂಡಿದ್ದೇವೆ. ಆದರೆ ಇದೀಗ ಪರಿಸ್ಥಿತಿ ಪೂರ್ಣ ಬದಲಾಗಿದೆ. ಯಾವಾಗ ಮೆಕ್ಕೆ ಜೋಳದ ಬೆಳೆಗೆ ಸರ್ಕಾರ ಬೆಂಬಲ ಬೆಲೆ ಘೋಷಿಸಿತು. ಹಾಗೇ ಇಂಡೋನೇಷಿಯಾ,ಸಿಂಗಪೂರ್,ಮಲೇಷಿಯಾದಂತಹ ದೇಶಗಳಿಗೆ ಮೆಕ್ಕೆಜೋಳ ರಫ್ತು ಆಗಲು ಆರಂಭಿಸಿತೋ ಜೋಳಕ್ಕೆ ಇನ್ನಿಲ್ಲದ ಬೇಡಿಕೆ ಆರಂಭವಾಯಿತು. ರೈತನಿಗೆ ನಿರೀಕ್ಷೆಗೂ ಮೀರಿದ ಹಣ ಸಿಗುವಂತಾಯಿತು. ಬಯಲುಸೀಮೆಗಳಲ್ಲಿ ಬೆಳೆಯುತ್ತಿದ್ದಂತಹ ಶೇಂಗಾ, ಸೂರ್ಯಕಾಂತಿ,ತೊಗರಿಗೆ ಹೆಚ್ಚಿನ ರೈತರು ಕಡಿವಾಣ ಹಾಕಿ ಮೆಕ್ಕೆ ಜೋಳಕ್ಕೆ ಮೊರೆ ಹೋದರು. ಹಾಗೇ ಅರೆ ಮಲೆನಾಡು ಪ್ರದೇಶಗಳಲ್ಲಿ ಭತ್ತ ಬೆಳೆಯುವ ಅವಕಾಶವಿದ್ದರೂ ಮೆಕ್ಕೆ ಜೋಳಕ್ಕೆ ಮೊರೆ ಹೋಗುತ್ತಿದ್ದಾರೆ. ಕಾರಣ ಕೇಳಿದರೆ ಎರಡು ಬಾರಿ ಗೊಬ್ಬರ ಹಾಕಿದರೆ ಸಾಕು ಹಾಗೇ ಒಮ್ಮೆ ಔಷಧಿ ಸಿಂಪಡಿಸಿದರೆ ಸಾಕು ಲಾಭ ನಿಶ್ಚಿತ. ಅದೇ ಭತ್ತ ಸೇರಿದಂತೆ ಇತರೆ ಬೆಳೆಗಳಿಗಾದರೆ ಆಗಾಗ ನೀರು ಹಾಯಿಸಬೇಕು,ಕಳೆ ತೆಗೆಸಬೇಕು.ಸಾಕಷ್ಟು ಖರ್ಚು. ಇದರ ಜೊತೆಗೆ ಭತ್ತದ ಬೆಲೆ ಯಾವಾಗ ಇಳಿಯುತ್ತದೋ ಎನ್ನುವ ಆತಂಕದ ವಿಷಯ ಎನ್ನುತ್ತಾರೆ. ಮೆಕ್ಕೆಜೋಳ ಎಂದಾಕ್ಷಣ ಡಿ.ಎ.ಪಿ ಮತ್ತು ಯೂರಿಯಾ ಗೊಬ್ಬರಗಳು ಅತೀ ಅವಶ್ಯ. ಕಳೆದ ವರ್ಷ ಹಾವೇರಿ ಗೋಲಿಬಾರ್ ಗೆ ಕಾರಣವಾದದ್ದು ಇದೇ ಡಿ.ಎ.ಪಿ., ಮೆಕ್ಕೆ ಜೋಳ ಎಂಬ ಬೆಳೆ ತನ್ನ ಸುತ್ತಮುತ್ತಲಿನ ಪ್ರದೇಶದ ನೀರನ್ನು ಸಾಕಷ್ಟು ಹೀರಿಕೊಳ್ಳುತ್ತದೆ. ಪದೇ, ಪದೇ ಇದೇ ಬೆಳೆಯನ್ನು ಬೆಳೆಯುವುದರಿಂದ ಭೂಮಿಯ ಫಲವತ್ತತೆ ಹಾಳಾಗುವುದು ನಿಶ್ಚಿತ. ಹಾಗೇ ವರ್ಷದಿಂದ ವರ್ಷಕ್ಕೆ ಇಳುವರಿ ಕಡಿಮೆಯಾಗುತ್ತಾ ಹೋಗುತ್ತದೆ. ಅದಕ್ಕಾಗಿ ರೈತ ಒಂದು ಚೀಲ ರಾಸಾಯನಿಕ ಗೊಬ್ಬರ ಸುರಿಯುವ ಕಡೆ ಎರಡು ಚೀಲ ಸುರಿಯುತ್ತಾನೆ. ಇದು ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಾ ಹೋಗುತ್ತದೆ. ಅದಕ್ಕೆ ಕೃಷಿ ತಜ್ಞರು ಪ್ರತೀ ವರ್ಷ ಬೆಳೆಯನ್ನು ಬದಲಾಯಿಸಿ ಎನ್ನುತ್ತಾರೆ. ಹಾಳಾದ ಹಣದ ಆಸೆ ಹಾಗೂ ಮೈ ಜಡ್ಡುಗೂಡಿದ ಪರಿಣಾಮ ಮೆಕ್ಕೆಜೋಳಕ್ಕೆ ಮೊರೆ ಹೋಗುವುದು ಸಾಮಾನ್ಯವಾಗಿದೆ. ಒಂದು ಮೆಕ್ಕೆಜೋಳದ ತೆನೆ ತಿಂದರೆ ದೇಹಕ್ಕೆ 5ಗ್ರಾಂ.ನಷ್ಟು ರಾಸಾಯಾನಿಕ ಗೊಬ್ಬರ ಹೋಗಿರುತ್ತದೆ. ಹಾಗೇ ಬರಬರುತ್ತಾ ಭೂಮಿ ಬರಡಾಗುತ್ತದೆ. ಮುಂದಿನ ದಿನಗಳಲ್ಲಿ ಆ ಭೂಮಿಯಲ್ಲಿ ಏನನ್ನೂ ಬೆಳೆಯಲು ಸಾಧ್ಯವಿಲ್ಲ. ಇದರ ಬಗ್ಗೆ ಹಲವಾರು ಜಾಗೃತಿಕ ಕಾರ್ಯಕ್ರಮಗಳು ನಡೆದಿದೆಯಾದರೂ ವರ್ಷದಿಂದ ವರ್ಷಕ್ಕೆ ಮೆಕ್ಕೆ ಜೋಳದ ಬೆಳೆ ಮಾತ್ರ ಹೆಚ್ಚಾಗುತ್ತಿದೆ. ಪ್ರತೀ ವರ್ಷ ಗುಡ್ಡ ಸಮತಟ್ಟು ಮಾಡುವುದು, ಅರಣ್ಯ ನಾಶ ಮಾಡಿ ಮೆಕ್ಕೆ ಜೋಳ ಹಾಕುವುದು ಸಾಕಷ್ಟು ರೈತರ ಅಭ್ಯಾಸವಾಗಿದೆ. ಅರಣ್ಯ ಇಲಾಖೆಯವರ ಕಠಿಣ ಕ್ರಮಕ್ಕೆ ಮುಂದಾದರೆ ಜನಪ್ರತಿನಿಧಿಗಳ ಅಡ್ಡಗಾಲು. ಇದೊಂದು ಗೊತ್ತಿರದ ದೊಡ್ಡ ಸಮಸ್ಯೆ. ಇದು ನಿಶ್ಚಿತವಾಗಿ ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆಶ್ಚರ್ಯಕರ ಸಂಗತಿಯೆಂದರೆ ಭತ್ತ ಬೆಳೆಯುವವರು ಕೂಡ ಮೆಕ್ಕೆ ಜೋಳ ಬೆಳೆಯುತ್ತಿದ್ದಾರೆ. ಇದರ ಜೊತೆಗೆ ಕೇರಳಿಯನ್ನರ ಹಾವಳಿಯಿಂದಾಗಿ ಹಾವೇರಿ,ದಾವಣಗೆರೆ,ರಾಯಚೂರು,ಶಿವಮೊಗ್ಗ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ಇದೂ ಕೂಡ ಭೂಮಿಗೆ ಮಾರಕ. ಕೇರಳಿಯನ್ನರು ನೀಡುವ ಸ್ವಲ್ಪ ಹಣದ ಆಸೆಗೆ ತನ್ನ ಭೂಮಿ ನೀಡುತ್ತಿರುವ ರೈತ ಮುಂದೊಂದು ದಿನ ನಿಶ್ಚಿತವಾಗಿ ಪರೆದಾಡುತ್ತಾನೆ.

ಗಿಣಿ ಮೂತಿ ಟೊಮೆಟೊ


ಶಿಕಾರಿಪುರ ಪಟ್ಟಣದ ರವಿ ಎಂಬುವರ ಮನೆಯ ಹಿತ್ತಲಿನ ಟೊಮೊಟೊ ಗಿಡದಲ್ಲಿ ಗಿಣಿ ಮಾದರಿಯ ಟೊಮೊಟು ಒಂದು ಬಿಟ್ಟಿದೆ. ಎರಡು ಟೊಮೊಟೊಗಳು ಸಯಾಮಿ ರೂಪದಲ್ಲಿ ಇದ್ದು, ಅದರ ತೊಟ್ಟು ಗಿಣಿಯ ಕೊಕ್ಕಿನ ರೀತಿ ಇದೆ.

ಹೀಗೊಂದು ದೆವ್ವದ ಕಥೆ - ಹೆದರಬೇಡಿ

ನಮ್ಮದು ವಟಾರದ ಮನೆ. ಅಕ್ಕಪಕ್ಕದಲ್ಲಿ ಇರುವವರೆಲ್ಲಾ ಚಿಕ್ಕಪ್ಪ ದೊಡ್ಡಪ್ಪಂದಿರು. ಎಲ್ಲರೂ ಓಡಾಡುವುದಕ್ಕೆ ಓಣಿ ಇದೆ. ಇಲ್ಲಿ ದೊಡ್ಡಪ್ಪ ಕಟ್ಟಿಗೆ ಹಾಕಿದ್ದಾರೆ. ನಾವೊಂದಿಷ್ಟು ಗಿಡಗಳನ್ನು ಹಾಕಿದ್ದೇವೆ. ಮುಂದೆ ದೊಡ್ಡ ಬಾವಿ ಇದೆ. ಹತ್ತಾರು ವರ್ಷಗಳ ಹಿಂದೆ ಇದರಲ್ಲಿ ಕೆಲವರು ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಮ್ಮ ಬದುಕಿದ್ದಾಗ, ನಮ್ಮಲ್ಲಿ ಚಂಡಿ ಸಾಕಿದೀವಿ. ಅದು ಬೀಳೆ ಸೀರೇ ಉಡ್ಕೊಂಡು ರಾತ್ರಿಯೆಲ್ಲಾ ಓಡಾಡುತ್ತೆ. ಹಾಗೇ ನಿಮ್ಮ ದೊಡ್ಡಪ್ಪ ಸಾಯುವಾಗ ಅವರ ಇನ್ನೂ ಆಸೆ ತೀರಲಿಲ್ಲ. ಅವರೂ ಓಡಾಡುವ ಸಾಧ್ಯತೆ ಇದೆ. ಬಾವಿಯಲ್ಲಿ ಬಿದ್ದಿರೋರು ದೆವ್ವಾ ಆಗಿರೋ ಅವಕಾಶಗಳು ಹೆಚ್ಚು. ಹಂಗೆಲ್ಲಾ ರಾತ್ರಿ ಹೊತ್ತು ಹೊರ ಹೋಗಬೇಡ ಅನ್ನುತ್ತಿದ್ದಳು.

ಇವನೆಲ್ಲಿ ಎದ್ದು ಹೋಗ್ತಾನೆ ಅಂತಾನೋ, ಅಥವಾ ಏನಾದರೂ ಹೆದರು ಬಿಟ್ಟರೆ ಅನ್ನುವುದಕ್ಕೆ ಅಮ್ಮ ನುಡಿದಿರಬೇಕು. ರಾತ್ರಿ ಸಮಯ ಯಾವುದಾದರೂ ಪತ್ರಿಕೆ,ಪುಸ್ತಕ, ಬೇಜಾರು ಆಯ್ತೆಂದರೆ ಸಣ್ಣ ಧ್ವನಿಯಲ್ಲಿ ಸುಮಾರು ರಾತ್ರಿ 2ರವರೆಗೆ ಟಿವಿ ನೋಡೋ ಹವ್ಯಾಸವಾಗಿ ಬಿಟ್ಟಿದೆ. ಏನೂ ಇಲ್ಲಾ ಅಂದ್ರೆ ಯಾವುದಾದರೂ ವಿಷಯದ ಮೇಲೆ ರಾತ್ರಿಯಲ್ಲಿ ಬರೆಯುವುವ ಹವ್ಯಾಸ. ಈ ಸಮಯದಲ್ಲಿ ಮನೆಯೆಲ್ಲಾ ನಿಶ್ಯಬ್ದವಾಗಿರುತ್ತದೆ. ಇದ್ದಕ್ಕಿದ್ದಂತೆ ಓಣಿಯಲ್ಲಿ ಧಡಾ,ಧಡಾ ಅಂತಾ ಓಡಾಡುವ ಶಬ್ದ. ಆ ನಂತರ ಆ ಕಡೆಯಿಂದ ಈ ಕಡೆಗೆ ಓಡಿ ಹೋದಂತಾಗುವುದು. ಸ್ವಲ್ಪ ಹೊತ್ತು ಮತ್ತೆ ನಿಶ್ಯಬ್ದವಾದ ಮೇಲೆ. ಗಲ್,ಗಲ್ ಆಗ್ತಾ ಇತ್ತು. ಇತ್ತೀಚೆಗೆ ನನ್ನ ಹೆಂಡ್ತಿಗೆ ಹೇಳಿದೆ. ಏನು ಇದು ಅಂತಾ. ಹಂಗೆಲ್ಲಾ ಬಾಗಿಲು ತೆಗೆದು ಹೋಗಬೇಡ್ರಿ. ಯಾಕ್ ಬೇಕು ರಿಸ್ಕ್ ಅಂತಾ.

ಆದ್ರೆ ಕುತೂಹಲ ಅನ್ನುವುದು ಯಾರ ಅಪ್ಪನ ಮನೆಯದು.ಇದು ಏನೂಂತ ನೋಡಲೇಬೇಕು. ಕೆಲ ದಿನಗಳ ಹಿಂದೆ ಮತ್ತೆ ಇದೇ ಅನುಭವವಾಯ್ತು. ತಕ್ಷಣ ಹೊರಗಡೆ ದೀಪಹಾಕಿ ಬಾಗಿಲು ತೆಗದ್ರೆ ಯಾರೂ ಇಲ್ಲ. ಬಂದು ಒಳಕೂತೆ ಮತ್ತೆ ನಿಶ್ಯಬ್ದ. ಗಲ್,ಗಲ್ ಸೌಂಡ್. ಸ್ವಲ್ಪ ಮನಸಿಗೆ ಕಸಿವಿಯಾಯಿತು. ಇದು ಏನು ಅಂತಾ ನೋಡ್ಲೇ ಬೇಕಾಲ್ಲಾ ಅಂತಾ. ಮೊನ್ನೆ ರಾತ್ರಿ 12 ಆಗ್ತಿದ್ದಂಗೆ. ಬಾಗಿಲಿಗೆ ಚಿಲಕ ಹಾಕದೆ ಕಾಯ್ತಾ ಇದ್ದೆ. ಓಡಾಡುವ ಶಬ್ದ ಬಂತು. ಬಾಗಿಲು ತಕ್ಷಣ ತೆಗದರೆ, ಬಡ್ಡೀ ಮಗಂದು ಪಕ್ಕದ ಮನೆ ಹಸು ಗಿಡ, ಎಸೆದಿರೋ ತರಕಾರಿ ಸಿಪ್ಪೆ ತಿನ್ನೋಕೆ ಬಂದಿತ್ತು. ಸಮ್ನೆ ಒಳ ಬಂದೆ. ಮತ್ತೆ ಧಡಾ, ಧಡಾ ಅಂತಾ ಶಬ್ದ, ಬಾಗಿಲು ತೆಗೆದರೆ ಹೆಗ್ಗಣ ಧಿಡೀರ್ ಅಂತಾ ಬಂದರೆ ಹಸು ಓಡಿ ಹೋಗ್ತಾ ಇತ್ತು. ಹೊರಗಡೆ ಕತ್ತಲು ಇದ್ದುದರಿಂದ ಅದು ಕಟ್ಟಿಗೆ ಹಿಂದೆ ನಿಂತರೆ ಕಾಣ್ತಾನೇ ಇರ್ಲಿಲ್ಲ. ಓಹ್ ಅಂತು ಸಂಶೋಧನೆ ಮಾಡ್ದೆ ಅಂತಾ ಖುಷಿಯಾಗಿ ಒಳ ಬಂದು ಇದನ್ನು ಬೆಳಗ್ಗೆ ನನ್ನ ಹೆಂಡ್ತಿಗೆ ಹೇಳಬೇಕು ಅಂತಾ ಪುಸ್ತಕ ಓದುತ್ತಾ ಕೂತೆ.

ಆದರೆ ಗಲ್,ಗಲ್ ಶಬ್ದ ಮಾತ್ರ ಬರ್ತಾನೆ ಇತ್ತು. ಹೊರಗೆ ಹೋಗಿ ಎಲ್ಲಾ ನೋಡಿದ್ರೂ ಏನೂ ಇಲ್ಲ. ಕೊನೆಗೆ ಒಳ ಹೋಗಿ ನೋಡಿದ್ರೆ. ನೀರಿನ ಫಿಲ್ಟರ್ ನ್ನ ಸ್ಟೂಲ್ ಮೇಲೆ ಇದೆ. ಅದರಿಂದ ಬೀಳೋ ಒಂದಂದು ಹನಿ ಮನೆಯೆಲ್ಲಾ ನೀರಾಗುತ್ತೆ ಅಂತಾ ಕಳಗೆ ಒಂದು ಖಾಲಿ ಪಾತ್ರೆ ಇಡುವುದು ಅಭ್ಯಾಸ. ನೀರು ಮೇಲಿಂದ ಪಾತ್ರೆಯೊಳಗೆ ಬಿದ್ದಾಗಲೆಲ್ಲಾ ಈ ರೀತಿ ಶಬ್ದ ಕೇಳಿಸ್ತಾ ಇತ್ತು. ಅಂತೂ ಒಂದು ಹಲವು ದಿನಗಳ ಭಯ ಮತ್ತು ಕುತೂಹಲಕ್ಕೆ ಅಂತ್ಯ ಸಿಕ್ಕಿತಲ್ಲಾ ಅಂತಾ ಖುಷಿಯಾದೆ. ಅವಳಿಗೂ ಹೇಳಿದೆ. ಹೌದಾ. ನಾನೂ ಹಂಗೇ ಅನ್ಕಂಡಿದ್ದೆ ಅಂದ್ಲು.

ಪೃಥ್ವಿ ಎಂಬ ಉತ್ತಮ ಚಿತ್ರ - ವಿಮರ್ಶೆ

ಪೃಥ್ವಿ ಚಿತ್ರ ಉತ್ತಮವಾಗಿದೆ. ಜಿಲ್ಲಾಧಿಕಾರಿಯಾಗಿ ಪುನೀತ್ ರಾಜ್ಕುಮಾರ್ ಅಮೋಘ್ನ ಅಭಿನಯ ನೀಡಿದ್ದಾರೆ. ಸಾಮಾನ್ಯವಾಗಿ ಡ್ಯಾನ್ಸ್, ಫೈಟ್ಸ್ ಗಳಲ್ಲಿ ಹೆಚ್ಚಾಗಿ ಕಾಣುತ್ತಿದ್ದ ಪುನೀತ್, ಈ ಚಿತ್ರದಲ್ಲಿ ಅಭಿನಯಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ. ಒಬ್ಬ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಪೃಥ್ವಿ ಐ.ಎ.ಎಸ್ ಪಾಸ್ ಮಾಡಿ ಜಿಲ್ಲಾಧಿಕಾರಿಯಾಗುತ್ತಾರೆ. ಸರ್ಕಾರ ಇವರನ್ನು ಬಳ್ಳಾರಿಗೆ ನಿಯೋಜಿಸುತ್ತದೆ. ಬಳ್ಳಾರಿಯು ಗಣಿಧಣಿಗಳ ಅಟ್ಟಹಾಸದಲ್ಲಿ ಮೆರೆಯುತ್ತಿದೆ ಎನ್ನುವುದನ್ನು ಮೊದಲು ಕುಲಂಕುಷವಾಗಿ ಅರಿತು. ಒಬ್ಬರಾದ ನಂತರ ಒಬ್ಬರಿಗೆ ನಿಧಾನವಾಗಿ ಕಡಿವಾಣ ಹಾಕುತ್ತಾ ಬರುತ್ತಾರೆ. ಅಧಿಕಾರ ಹಾಗೂ ಹಣವಿರುವ ಗಣಿಧಣಿಗಳು ಇನ್ನಿಲ್ಲದ ಹಿಂಸೆಯನ್ನು ನೀಡುತ್ತಾರೆ. ರೌಡಿ ಪಡೆಗಳಿಂದ ಕೊಲೆ ಮಾಡುವ ಸಂಚೂ ಕೂಡ ನಡೆಯುತ್ತದೆ. ಸರ್ಕಾರದಿಂದ ಕಾರ್ಯಗಳಿಗೆ ಅಡ್ಡಿ ಬರುತ್ತದೆ. ಆದರೂ ಯಾವುದಕ್ಕೂ ಮಣಿಯದೆ ತನ್ನ ಕಾರ್ಯವನ್ನು ನಿಷ್ಠೆಯಿಂದ ಒಬ್ಬ ಅಧಿಕಾರಿ ನಿರ್ವಹಿಸುತ್ತಾನೆ. ಇದು ಇತರರಿಗೆ ಮಾದರಿಯಾಗಿದೆ ಎನ್ನುವುದನ್ನು ತೋರಿಸುತ್ತದೆ.

ಈ ಸಂದರ್ಭದಲ್ಲಿ ನಾಯಕಿ ತಮಗೆ ಬಳ್ಳಾರಿ ಬೇಡವೇ ಬೇಡ, ಬೇರೆಯಾವುದಾದರೂ ಜಿಲ್ಲೆಗೆ ಹೋಗಿ ಸಂತೋಷವಾಗಿ ಇರೋಣವೇಂದಾಗ, ಇಲ್ಲಿನ ಕೊಳೆಯನ್ನು ತೊಳೆದೇ ನನ್ನ ಮುಂದಿನ ಕಾರ್ಯ ಎಂದು ನಾಯಕ ಹೇಳುವುದು ಎಲ್ಲರನ್ನೂ ಮೆಚ್ಚಿಸುತ್ತದೆ. ಇದರ ಮಧ್ಯೆ ಅಲ್ಲಿನ ಜನರ ದಯನೀಯ ಸ್ಥಿತಿಯ ಜೀವನ, ಕಲುಷಿತ ನೀರಿನ ಸಮಸ್ಯೆಯನ್ನು ಒಂದಾದರೊಂದರಂತೆ ಬಗೆಹರಿಸುತ್ತಾ ಬರುತ್ತಾನೆ ನಾಯಕ. ತಂದೆ, ತಾಯಿಗಳ ಪ್ರೀತಿ ಬಹಳ ಚೆನ್ನಾಗಿ ತೋರಿಸಲಾಗಿದೆ. ಪ್ರೌಢ ಅಭಿನಯವನ್ನು ನೀಡಿರುವ ಪುನೀತ್ ತಾನು ಅಪ್ಪನಿಗಿಂತ ಏನೂ ಕಡಿಮೆ ಇಲ್ಲ ಎಂದು ತೋರಿಸಿದ್ದಾರೆ.

ಸಾಧು ಕೋಕಿಲರ ತಮಾಷೆ ಚೆನ್ನಾಗಿದೆ. ಚಿತ್ರದಲ್ಲಿ ಎಲ್ಲೂ ಅದ್ದೂರಿತನ ಇಲ್ಲ. ಪ್ರತಿಯೊಂದು ಸಂಭಾಷಣೆಯೂ ಚಿತ್ರದ ಕಥೆಗೆ ಸಹಕರಿಯಾಗುತ್ತಾ ಸಾಗಿದೆ. ಅನವಶ್ಯಕ ಹಾಗೂ ಗೊಂದಲದ ಸೀನ್ಗಳು ಎಲ್ಲೂ ಸಿಗುವುದಿಲ್ಲ. ಇದು ಈಗಿನ ಸರ್ಕಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮಧ್ಯದಲ್ಲಿ ಬರುವ ಉತ್ತಮ ಹಾಡುಗಳು ಮನಸ್ಸನ್ನು ಮುದಗೊಳಿಸುತ್ತದೆ. ನಿರ್ದೇಶಕ ತನ್ನ ಕಾರ್ಯ ಚೆನ್ನಾಗಿಯೇ ನಿರ್ವಹಿಸಿದ್ದಾನೆ ಎನ್ನಬಹುದಾಗಿದೆ. ಚಿತ್ರ ಬಿಡುಗಡೆಯಾದ ನಂತರ ಗಣಿಧಣಿಗಳ ವಿರೋಧಿ ಅನಿಲ್ ಲಾಡ್ ಈ ಚಿತ್ರ ತೆಗೆಸಿದ್ದಾರೆ ಎಂಬ ಸುದ್ದಿಯೆದಾರೂ, ಪ್ರಸಕ್ತ ಸ್ಥಿತಿಗೆ ಸರಿಯಾಗಿದೆ. ದೇವೆಗೌಡ, ಶ್ರೀರಾಮುಲು,ಜನಾರ್ಧನರೆಡ್ಡಿ,ಯಡಿಯೂರಪ್ಪ ಚಿತ್ರ ನೋಡಿ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಟುಂಬ ಸಮೇತ ಥಿಯೇಟರಿಗೆ ತೆರಳಿ ನೋಡಬಹುದಾದ ಚಿತ್ರವಾಗಿದೆ. ಇವತ್ತಿನ ಕನ್ನಡ ಸಿನಿಮಾಗಳಲ್ಲಿ ಇದೊಂದು ಉತ್ತಮ ಚಿತ್ರ ಎಂದರೆ ತಪ್ಪಾಗಲಾರದು