Monday, June 28, 2010

ಪೃಥ್ವಿ ಎಂಬ ಉತ್ತಮ ಚಿತ್ರ - ವಿಮರ್ಶೆ

ಪೃಥ್ವಿ ಚಿತ್ರ ಉತ್ತಮವಾಗಿದೆ. ಜಿಲ್ಲಾಧಿಕಾರಿಯಾಗಿ ಪುನೀತ್ ರಾಜ್ಕುಮಾರ್ ಅಮೋಘ್ನ ಅಭಿನಯ ನೀಡಿದ್ದಾರೆ. ಸಾಮಾನ್ಯವಾಗಿ ಡ್ಯಾನ್ಸ್, ಫೈಟ್ಸ್ ಗಳಲ್ಲಿ ಹೆಚ್ಚಾಗಿ ಕಾಣುತ್ತಿದ್ದ ಪುನೀತ್, ಈ ಚಿತ್ರದಲ್ಲಿ ಅಭಿನಯಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ. ಒಬ್ಬ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಪೃಥ್ವಿ ಐ.ಎ.ಎಸ್ ಪಾಸ್ ಮಾಡಿ ಜಿಲ್ಲಾಧಿಕಾರಿಯಾಗುತ್ತಾರೆ. ಸರ್ಕಾರ ಇವರನ್ನು ಬಳ್ಳಾರಿಗೆ ನಿಯೋಜಿಸುತ್ತದೆ. ಬಳ್ಳಾರಿಯು ಗಣಿಧಣಿಗಳ ಅಟ್ಟಹಾಸದಲ್ಲಿ ಮೆರೆಯುತ್ತಿದೆ ಎನ್ನುವುದನ್ನು ಮೊದಲು ಕುಲಂಕುಷವಾಗಿ ಅರಿತು. ಒಬ್ಬರಾದ ನಂತರ ಒಬ್ಬರಿಗೆ ನಿಧಾನವಾಗಿ ಕಡಿವಾಣ ಹಾಕುತ್ತಾ ಬರುತ್ತಾರೆ. ಅಧಿಕಾರ ಹಾಗೂ ಹಣವಿರುವ ಗಣಿಧಣಿಗಳು ಇನ್ನಿಲ್ಲದ ಹಿಂಸೆಯನ್ನು ನೀಡುತ್ತಾರೆ. ರೌಡಿ ಪಡೆಗಳಿಂದ ಕೊಲೆ ಮಾಡುವ ಸಂಚೂ ಕೂಡ ನಡೆಯುತ್ತದೆ. ಸರ್ಕಾರದಿಂದ ಕಾರ್ಯಗಳಿಗೆ ಅಡ್ಡಿ ಬರುತ್ತದೆ. ಆದರೂ ಯಾವುದಕ್ಕೂ ಮಣಿಯದೆ ತನ್ನ ಕಾರ್ಯವನ್ನು ನಿಷ್ಠೆಯಿಂದ ಒಬ್ಬ ಅಧಿಕಾರಿ ನಿರ್ವಹಿಸುತ್ತಾನೆ. ಇದು ಇತರರಿಗೆ ಮಾದರಿಯಾಗಿದೆ ಎನ್ನುವುದನ್ನು ತೋರಿಸುತ್ತದೆ.

ಈ ಸಂದರ್ಭದಲ್ಲಿ ನಾಯಕಿ ತಮಗೆ ಬಳ್ಳಾರಿ ಬೇಡವೇ ಬೇಡ, ಬೇರೆಯಾವುದಾದರೂ ಜಿಲ್ಲೆಗೆ ಹೋಗಿ ಸಂತೋಷವಾಗಿ ಇರೋಣವೇಂದಾಗ, ಇಲ್ಲಿನ ಕೊಳೆಯನ್ನು ತೊಳೆದೇ ನನ್ನ ಮುಂದಿನ ಕಾರ್ಯ ಎಂದು ನಾಯಕ ಹೇಳುವುದು ಎಲ್ಲರನ್ನೂ ಮೆಚ್ಚಿಸುತ್ತದೆ. ಇದರ ಮಧ್ಯೆ ಅಲ್ಲಿನ ಜನರ ದಯನೀಯ ಸ್ಥಿತಿಯ ಜೀವನ, ಕಲುಷಿತ ನೀರಿನ ಸಮಸ್ಯೆಯನ್ನು ಒಂದಾದರೊಂದರಂತೆ ಬಗೆಹರಿಸುತ್ತಾ ಬರುತ್ತಾನೆ ನಾಯಕ. ತಂದೆ, ತಾಯಿಗಳ ಪ್ರೀತಿ ಬಹಳ ಚೆನ್ನಾಗಿ ತೋರಿಸಲಾಗಿದೆ. ಪ್ರೌಢ ಅಭಿನಯವನ್ನು ನೀಡಿರುವ ಪುನೀತ್ ತಾನು ಅಪ್ಪನಿಗಿಂತ ಏನೂ ಕಡಿಮೆ ಇಲ್ಲ ಎಂದು ತೋರಿಸಿದ್ದಾರೆ.

ಸಾಧು ಕೋಕಿಲರ ತಮಾಷೆ ಚೆನ್ನಾಗಿದೆ. ಚಿತ್ರದಲ್ಲಿ ಎಲ್ಲೂ ಅದ್ದೂರಿತನ ಇಲ್ಲ. ಪ್ರತಿಯೊಂದು ಸಂಭಾಷಣೆಯೂ ಚಿತ್ರದ ಕಥೆಗೆ ಸಹಕರಿಯಾಗುತ್ತಾ ಸಾಗಿದೆ. ಅನವಶ್ಯಕ ಹಾಗೂ ಗೊಂದಲದ ಸೀನ್ಗಳು ಎಲ್ಲೂ ಸಿಗುವುದಿಲ್ಲ. ಇದು ಈಗಿನ ಸರ್ಕಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮಧ್ಯದಲ್ಲಿ ಬರುವ ಉತ್ತಮ ಹಾಡುಗಳು ಮನಸ್ಸನ್ನು ಮುದಗೊಳಿಸುತ್ತದೆ. ನಿರ್ದೇಶಕ ತನ್ನ ಕಾರ್ಯ ಚೆನ್ನಾಗಿಯೇ ನಿರ್ವಹಿಸಿದ್ದಾನೆ ಎನ್ನಬಹುದಾಗಿದೆ. ಚಿತ್ರ ಬಿಡುಗಡೆಯಾದ ನಂತರ ಗಣಿಧಣಿಗಳ ವಿರೋಧಿ ಅನಿಲ್ ಲಾಡ್ ಈ ಚಿತ್ರ ತೆಗೆಸಿದ್ದಾರೆ ಎಂಬ ಸುದ್ದಿಯೆದಾರೂ, ಪ್ರಸಕ್ತ ಸ್ಥಿತಿಗೆ ಸರಿಯಾಗಿದೆ. ದೇವೆಗೌಡ, ಶ್ರೀರಾಮುಲು,ಜನಾರ್ಧನರೆಡ್ಡಿ,ಯಡಿಯೂರಪ್ಪ ಚಿತ್ರ ನೋಡಿ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಟುಂಬ ಸಮೇತ ಥಿಯೇಟರಿಗೆ ತೆರಳಿ ನೋಡಬಹುದಾದ ಚಿತ್ರವಾಗಿದೆ. ಇವತ್ತಿನ ಕನ್ನಡ ಸಿನಿಮಾಗಳಲ್ಲಿ ಇದೊಂದು ಉತ್ತಮ ಚಿತ್ರ ಎಂದರೆ ತಪ್ಪಾಗಲಾರದು

No comments:

Post a Comment